‘ಗುಜರಾತ್ ಈಗಾಗಲೇ ಮಂಡ್ಯ ಬೆಲ್ಲ ಖರೀದಿ ನಿಷೇಧಿಸಿದ್ದು, ಕೇರಳ ಎರಡನೇ ರಾಜ್ಯವಾಗಿದೆ. ‘ಸಕ್ಕರೆ ನಾಡು’ ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆ ಈಗ ಕಳಪೆ ಹಾಗೂ ರಾಸಾಯನಿಕಯುಕ್ತ ಬೆಲ್ಲ ಉತ್ಪಾದನೆಯಲ್ಲಿ ಕುಖ್ಯಾತಿ ಪಡೆಯುತ್ತಿದೆ. ಎಪಿಎಂಸಿ ವರ್ತಕರು ‘ಮಂಡ್ಯ ಬೆಲ್ಲ’ ಎಂಬ ಬ್ರ್ಯಾಂಡ್ ಹೆಸರಿನಲ್ಲೇ ಮಾರಾಟ ಮಾಡುತ್ತಿದ್ದರು. ಈ ಹೆಸರಿನಲ್ಲಿ ವರ್ತಕರು ಹಾಗೂ ಕೆಲವು ಆಲೆಮನೆ ಮಾಲೀಕರು ದೊಡ್ಡ ಮಟ್ಟದ ದಂಧೆ ನಡೆಸಿರುವುದು ಈಗ ಬಯಲಾಗಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕಳಪೆ ಬೆಲ್ಲ ತರಿಸಿ, ಆಲೆಮನೆಗಳಲ್ಲಿ ಅದಕ್ಕೆ ಸಕ್ಕರೆ, ರಾಸಾಯನಿಕ ಸೇರಿಸಿ ಪುನರ್ ಉತ್ಪಾದನೆ ಮಾಡಿ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರ ತುರ್ತು ಗಮನಹರಿಸಬೇಕು’ ಎಂದರು.