ಔರಾದ್/ ಬೀದರ್: ಗೊಬ್ಬರ ಕಳುಹಿಸುವಂತೆ ದೂರವಾಣಿ ಕರೆ ಮಾಡಿದ ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮದ ವ್ಯಕ್ತಿಯೊಬ್ಬರನ್ನು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ತರಾಟೆಗೆ ತೆಗೆದುಕೊಂಡಿರುವ ಮೊಬೈಲ್ ಸಂಭಾಷಣೆಯ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸಚಿವ ಖೂಬಾ ಅವರಿಗೆ, ಕುಶಾಲ ಪಾಟೀಲ ಎಂಬುವರು ಕರೆ ಮಾಡಿ, ‘ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ. ಜನ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಹೀಗಾದರೆ ನಿಮಗೆ ಮುಂದೆ ಚುನಾವಣೆಯಲ್ಲಿ
ತೊಂದರೆಯಾಗುತ್ತದೆ’ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಗೊಬ್ಬರ ಮನೆಮನೆಗೆ ಹಂಚುವ ಕೆಲಸ ನನ್ನದಲ್ಲ. ನಾನು ಕೇಂದ್ರ ಸಚಿವ. ಯಾವ ರಾಜ್ಯಕ್ಕೆ ಎಷ್ಟು ಗೊಬ್ಬರ ಕೊಡಬೇಕು ಅಷ್ಟು ಕೊಟ್ಟಿದ್ದೇನೆ. ನಿಮ್ಮ ಎಂಎಲ್ಎ ಇದ್ದಾನೆ. ಅಧಿಕಾರಿಗಳು ಇದ್ದಾರೆ ಅವರನ್ನು ಕೇಳಿ’ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಕುಶಾಲ ಪಾಟೀಲ ‘ನೀವು ಈ ರೀತಿ ಮಾತನಾಡಿದರೆ ಅಂಜುವ ವ್ಯಕ್ತಿ ನಾನಲ್ಲ. ನಾನೂ ಎಲ್ಲದಕ್ಕೂ ತಯಾರಿದ್ದೀನಿ’ ಎನ್ನುವ ಖೂಬಾ ಅವರ ಜತೆಗಿನ ನಾಲ್ಕು ನಿಮಿಷದ ಸಂಭಾಷಣೆಯ ಧ್ವನಿಮುದ್ರಣ ಎಲ್ಲೆಡೆ ಹರಿದಾಡುತ್ತಿದೆ.
ಈ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿರುವ ಖೂಬಾ ಅವರು, ‘ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ರೈತನ ಹೆಸರಲ್ಲಿ ಮೊಬೈಲ್ನಲ್ಲಿ ಆಡಿದ ಸಂಭಾಷಣೆ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ. ಆದರೆ, ನಾನು ಸದಾಕಾಲ ರೈತರ ಜತೆಗೆ ಇದ್ದೇನೆ’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.