ಬೆಂಗಳೂರು: ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ನಿಯ ಆರೋಗ್ಯ ವಿಚಾರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ವಿದ್ಯಾರ್ಥಿನಿಯ ಚಿಕಿತ್ಸೆಗೆ ಇಲಾಖೆಯಿಂದ ತಕ್ಷಣ ₹ 1 ಲಕ್ಷ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಕೆಂಗೇರಿ ಬಳಿ ರಸ್ತೆ ಅಪಘಾತದಲ್ಲಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಗಾಯಗೊಂಡಿದ್ದಳು. ಆಕೆಗೆ ಎರಡು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಶಸ್ತ್ರಚಿಕಿತ್ಸೆ ನಡೆಸುವಂತೆ ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಮನವಿ ಮಾಡಿದರು.
ವಿದ್ಯಾರ್ಥಿನಿಯ ತಂದೆ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಭದ್ರತಾ ಸಿಬ್ಬಂದಿ. ಹೀಗಾಗಿ, ಆಸ್ಪತ್ರೆಯಿಂದಲೇ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿದ ಸುರೇಶ್ ಕುಮಾರ್, ಕೆಎಸ್ಆರ್ಟಿಸಿ ವತಿಯಿಂದಲೂ ನೆರವು ನೀಡುವಂತೆ ಕೋರಿದರು.
‘ನಿನ್ನ ಹೆಸರೇ ಯಶಸ್ವಿನಿ. ಚಿಕಿತ್ಸೆಯಲ್ಲಿ ಯಶಸ್ಸು ನಿನ್ನದಾಗುತ್ತದೆ’ ಎಂದು ವಿದ್ಯಾರ್ಥಿನಿಗೆ ಧೈರ್ಯತುಂಬಿದ ಸಚಿವರು, ‘ನಿಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ’ ಎಂದು ಪೋಷಕರಿಗೂ ಅಭಯ ನೀಡಿದರು.