ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು)ದಿಂದ ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.
‘ಕೆ.ಗೋವಿಂದರಾಜ್ (ಕೀಡಾ ಮತ್ತು ಸಮಾಜಸೇವೆ), ಮೋಹನದಾಸ್ ಪೈ (ಔದ್ಯಮಿಕ ಹಾಗೂ ಸಾಂಸ್ಥಿಕ ಹಣಕಾಸು ಕ್ಷೇತ್ರ) ಹಾಗೂ ಮೂರುಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ (ಧಾರ್ಮಿಕ, ಸಾಮಾಜಿಕ–ಶೈಕ್ಷಣಿಕ ಸೇವಾ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಸುವರ್ಣ ವಿಧಾನಸೌಧದಲ್ಲಿ ಅ. 5ರಂದು ಬೆಳಿಗ್ಗೆ 11.30ಕ್ಕೆ ನಡೆಯುವ 8ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ನಾರಾಯಣ ಪ್ರದಾನ ಮಾಡುವರು’ ಎಂದರು.