ಶಿರಸಿ: ಶಾಂತಿ ಕದಡುವ ಕೆಲಸ ಮಾಡುವ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆಗಳನ್ನು ನಿಷೇಧ ಮಾಡುವ ಬದಲು ಅವರ ಕಾರ್ಯಚಟುವಟಿಕೆ ಮೇಲೆ ನಿಗಾ ಇಡುವುದು ಮುಖ್ಯ. ಅದರತ್ತ ಗಮನಹರಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಧಾರವಾಡಕ್ಕೆ ತೆರಳುವ ಮುನ್ನ ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿದರು.
'ಸಂಘಟನೆಗಳ ನಿಷೇಧಿಸುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆಗಳ ಕಾರ್ಯಚಟುವಟಿಕೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ' ಎಂದರು.
'ಶಿವಮೊಗ್ಗ, ಆಳಂದ ಘಟನೆ ಹೊರತುಪಡಿಸಿದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ' ಎಂದರು.
'ಚುನಾವಣೆ ಸಮೀಪಿಸಿದಾಗ ಸಣ್ಣಪುಟ್ಟ ಘಟನೆಗಳು ರಾಜಕೀಯ ತಿರುವು ಪಡೆದುಕೊಳ್ಳುವುದು ಸಹಜ. ಎಲ್ಲ ರಾಜಕೀಯ ಪಕ್ಷಗಳು ಘಟನೆಗಳ ಲಾಭ ಪಡೆಯಲು ಹವಣಿಸುತ್ತವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು