ಹೊನ್ನಾಳಿ: ‘ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ₹ 1 ಲಕ್ಷ ಪರಿಹಾರ ನೀಡುತ್ತಿದೆ. ನಾನು ವೈಯಕ್ತಿಕವಾಗಿ ₹ 10 ಸಾವಿರ ಕೊಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನನಗೇ ಮತ ಹಾಕುತ್ತೇವೆ ಎಂದು ಎರಡೂ ಕೈಗಳನ್ನು ಎತ್ತಿ ಹೇಳಿ’ ಎಂದು ಶಾಸಕ ರೇಣುಕಾಚಾರ್ಯ ಅವರು ಮತದಾರರಿಗೆ ಹೇಳಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. .
ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳು, ಮನೆ ಹಾನಿಗೊಳಗಾದವರಿಗೆ ಸರ್ಕಾರದಿಂದ ಪರಿಹಾರ ಕೊಡುವ ಕಾರ್ಯಕ್ರಮ ಹೊನ್ನಾಳಿಯಲ್ಲಿ ಶನಿವಾರ ನಡೆದಿದ್ದು, ಅಲ್ಲಿಯೂ ರೇಣುಕಾಚಾರ್ಯ ಅವರು ಮಂಡಿಯೂರಿ, ಕೈ ಮುಗಿದು, ವೇದಿಕೆಗೆ ಹಣೆ ಹಚ್ಚಿ ‘ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕು’ ಎಂದಿದ್ದರು.
ಕಾರ್ಯಕ್ರಮದ ನಂತರ ಸಂತ್ರಸ್ತರನ್ನು ಮನೆಗೆ ಕರೆಯಿಸಿಕೊಂಡು, ‘ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ವೈಯಕ್ತಿಕವಾಗಿ ₹ 10 ಸಾವಿರ, ಮನೆ ಹಾನಿಗೊಳಗಾದವರಿಗೆ ₹ 1 ಸಾವಿರ ಕೊಡುತ್ತೇನೆ’ ಎಂದು ಹೇಳಿದ್ದು, ಮತ ನೀಡುತ್ತೇನೆ ಎಂದು ಅವರಿಂದ ಮಾತು ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.
‘ಸರ್ಕಾರ ನೀಡುವ ಪರಿಹಾರಕ್ಕೆ ಜನರು ಋಣ ತೀರಿಸಬೇಕು’ ಎಂಬ ಮಾತನ್ನು ಅವರು ಆಡಿದ್ದಾರೆ ಎನ್ನಲಾಗಿದೆ.
‘ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’
ಹೊನ್ನಾಳಿ: ‘ತಾಲ್ಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೇ ಮತ ನೀಡಿ ಗೆಲ್ಲಿಸಿ ಎಂದು ಜನರನ್ನು ಕೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
‘ಮಾಜಿ ಶಾಸಕರು ವಿಡಿಯೊ ಮಾಡಿಸಿ ನಾನು ಜನರಿಂದ ಆಣೆ, ಪ್ರಮಾಣ ಮಾಡಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವಳಿ ತಾಲ್ಲೂಕಿಗೆ ಸಾವಿರಾರು ಕೋಟಿ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡುತ್ತಿರುವುದನ್ನು ಸಹಿಸಿಕೊಳ್ಳಲಾಗದ ಮಾಜಿ ಶಾಸಕರು ವಿನಾ ಕಾರಣ ಆರೋಪಿಸಿದ್ದು, ಅದರಲ್ಲಿ ಹುರುಳಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.