ಬೆಂಗಳೂರು: ಜನರಿಗೆ ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.
ಡಿ.ಕೆ. ಶಿವಕುಮಾರ್ ಅವರೇ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಟ್ವಿಟರ್ ಹ್ಯಾಂಡಲ್ನಲ್ಲಿ ಟೀಕಿಸಲಾಗಿದೆ.
ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ ಎಂದು ಬಿಜೆಪಿ ಕುಟುಕಿದೆ.
ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ @DKShivakumar ಅವರೇ,
ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ.
ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ.
ಈ ಮಧ್ಯೆ, ಪಕ್ಷದ ಶಾಸಕರು ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ₹ 1 ಕೋಟಿ ಸೇರಿದಂತೆ ₹ 100 ಕೋಟಿಯನ್ನು ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ ಒಪ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಷಯ ಪ್ರಕಟಿಸಿದರು.