ಮೈಸೂರು: ‘ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಹೀಗಿರುವಾಗ ಆ ವಿಷಯದ ಬಗ್ಗೆ ಚರ್ಚೆ ಅನಗತ್ಯ’ ಎಂದು ಕಾನೂನು ಸಚಿವಜೆ.ಸಿ.ಮಾಧುಸ್ವಾಮಿ ಹೇಳಿದರು.
ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಹಿಜಾಬ್ ವಿಚಾರದಲ್ಲಿ ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆಗೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆಯಲ್ಲ’ ಎಂದು ಅವರು ತಿಳಿಸಿದರು.
‘ಹೈಕೋರ್ಟ್ ತೀರ್ಪು ಪರವಾಗಿ ಬಂದಿಲ್ಲ ಎಂದಾದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಉಲ್ಲಂಘಿಸುವುದು, ಪ್ರತಿಭಟಿಸುವುದು ಸರಿಯಲ್ಲ. ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವುದು ನಮ್ಮ ಜವಾಬ್ದಾರಿ. ಈ ಕರ್ತವ್ಯದಲ್ಲಿ ವಿಫಲರಾಗಿ ಛೀಮಾರಿ ಹಾಕಿಸಿಕೊಳ್ಳಲು ನಾವು ತಯಾರಿಲ್ಲ’ ಎಂದು ತಿಳಿಸಿದರು.
‘ದಿ ಕಾಶ್ಮೀರ್ ಫೈಲ್ಸ್’ ನೋಡಲು ಯಾರಿಗೂ ಬಲವಂತ ಮಾಡುವುದಿಲ್ಲ. ಈ ಹಿಂದೆ ಏನು ನಡೆದಿತ್ತು ಎಂಬುದು ಜನರಿಗೆ ತಿಳಿಯಬೇಕು. ಕಾಶ್ಮೀರದ ಪಂಡಿತರು ಅನುಭವಿಸಿದ್ದ ನೋವನ್ನು ಸಿನಿಮಾ ಮಾಧ್ಯಮದ ಮೂಲಕ ಜನರಿಗೆ ತಿಳಿಸುವ ಕೆಲಸ ಆಗಿದೆ. ಅದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.