ಬೆಂಗಳೂರು: ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳು ಸೇರಿದಂತೆ ರಾಜ್ಯದ ಯಾರೊಬ್ಬರೂ ಸುರಕ್ಷಿತರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಶುಕ್ರವಾರ ಟೀಕಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ನಡೆದು ಮೂರು ದಿನವಾಗಿದೆ. ಆರೋಪಿಗಳ ಬಂಧನವಾಗಿಲ್ಲ. ಬಿಜೆಪಿ ಆಡಳಿತದಲ್ಲಿ ಜನರು ಸುರಕ್ಷಿತರಾಗಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ’ ಎಂದರು.
‘ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಪಾಪ, ಅವರ ಮೇಲೆಯೇ ಎಲ್ಲವನ್ನೂ ಬಿಡುವಂತದ್ದಲ್ಲ. ಈ ಪ್ರಕರಣದಲ್ಲಿ ಇಡೀ ಸರ್ಕಾರವೇ ಹೊಣೆ ಹೊರಬೇಕು. ಮುಖ್ಯಮಂತ್ರಿ ಅವರು ಸಂಪೂರ್ಣ ಜವಾಬ್ದಾರಿ ಹೊರಬೇಕು’ ಎಂದು ಹೇಳಿದರು.