ಮೈಸೂರು: ಮುಖ್ಯಮಂತ್ರಿ ನಡೆಸುವ ಸಭೆಗಾಗಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಸುಮಾರು ಮೂರು ತಾಸು ಕಾದು ಕುಳಿತ ಪ್ರಸಂಗ ಸೋಮವಾರ ನಡೆಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಬೆಳಿಗ್ಗೆ11.15 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನೆ ಸಭೆ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಅಧಿಕಾರಿಗಳು ಮುಕ್ಕಾಲು ತಾಸು ಮೊದಲೇ ಬಂದು ಆಸೀನರಾಗಿದ್ದರು. ಆದರೆ, ಚಾಮುಂಡಿ ದರ್ಶನ ಪಡೆದು, ಬಿಜೆಪಿ ಕಚೇರಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿಗೆ ಬರುವಷ್ಟರಲ್ಲಿ ಮಧ್ಯಾಹ್ನ 12.30 ಆಗಿತ್ತು.ಬಂದ ತಕ್ಷಣ ಮೊದಲು ಶಾಸಕರು ಹಾಗೂ ಜಿಲ್ಲಾಧಿಕಾರಿ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಸುಮಾರು ನೂರು ಅಧಿಕಾರಿಗಳ ಕಾಯುವಿಕೆ ಮುಂದುವರಿಯಿತು. ಕೊನೆಗೂ ಅಧಿಕಾರಿಗಳ ಸಭೆ ನಡೆಯಲೇ ಇಲ್ಲ.
ಜನಜಂಗುಳಿ: ಚಾಮುಂಡಿ ಬೆಟ್ಟ, ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ, ಸಚಿವರನ್ನು ಸ್ವಾಗತಿಸಲು ಅಪಾರ ಪ್ರಮಾಣದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಹಾರ ಹಾಕಲು ನೂಕು ನುಗ್ಗಲು ಸಂಭವಿಸಿತು. ಕೋವಿಡ್ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಯಿತು.