ಬೆಂಗಳೂರು: ಆನ್ಲೈನ್ ಜೂಜಾಟದ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ನಿಯಮಾವಳಿ ರೂಪಿಸುವ ತನಕ ಎಲ್ಲಾ ರೀತಿಯ ಆನ್ಲೈನ್ ಜೂಜಾಟ ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.
‘ಕೋವಿಡ್ ಸಂದರ್ಭದಲ್ಲಿ ಮೋಸದ ಆನ್ಲೈನ್ ಜೂಜಿಗೆ ಯುವ ಸಮೂಹ ಬಲಿಯಾಗುತ್ತಿದ್ದಾರೆ. ನಿಯಮಾವಳಿ ರೂಪಿಸುವಂತೆ ಮನವಿ ಮಾಡಿದ್ದರೂ ಸರ್ಕಾರ ಪರಿಗಣಿಸಿಲ್ಲ’ ಎಂದು ಅರ್ಜಿದಾರರಾದ ದಾವಣಗೆರೆಯ ಡಿ.ಆರ್. ಶಾರದಾ ಆರೋಪಿಸಿದ್ದಾರೆ.
‘ಮುಂಬೈನ ಆನ್ಲೈನ್ ರಮ್ಮಿ ಫೌಂಡೇಷನ್(ಟಿಒಆರ್ಎಫ್) ಅನ್ನು ಪ್ರತಿವಾದಿಯಾಗಿ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡುವ ಮುನ್ನ ರಾಜ್ಯ ಸರ್ಕಾರ ಈ ವಿಷಯದಲ್ಲಿ ಸ್ಪಷ್ಟ ನಿಲುವು ದಾಖಲಿಸಬೇಕು’ ಎಂದು ಪೀಠ ತಿಳಿಸಿತು. ಜೂ.22 ತನಕ ಸಮಯ ನೀಡಿ ವಿಚಾರಣೆ ಮುಂದೂಡಿತು.
‘ರಮ್ಮಿ ಒಂದು ಕೌಶಲದ ಆಟವೇ ಹೊರತು ಜೂಜಲ್ಲ. ದಂಡದ ನಿಬಂಧನೆಗಳಿಂದ ಈ ಆಟ ಮುಕ್ತವಾಗಿದೆ.ಆಟಗಾರರ ಆಸಕ್ತಿಗಳನ್ನು ರಕ್ಷಿಸುವ ಕೆಲಸವನ್ನು ಫೆಡರೇಷನ್ ಮಾಡುತ್ತಿದೆ’ ಎಂದು ಟಿಒಆರ್ಎಫ್ ಅಭಿಪ್ರಾಯಪಟ್ಟಿದೆ.