ಹುಬ್ಬಳ್ಳಿ: ಮನೆ ಬಾಗಿಲಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡುವ ಪಶು ಸಂಜೀವಿನಿ 1962 ಆಂಬುಲೆನ್ಸ್ ಸೇವೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಭಾನುವಾರ ಸಿದ್ಧಾರೂಢ ಮಠದಲ್ಲಿ ಗೋ ಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ತಾಲ್ಲೂಕಿಗೆ ಒಂದೊಂದು ಪಶು ಸಂಜೀವಿನಿ ಆಂಬುಲೆನ್ಸ್ ನೀಡಲಾಗುವುದು. ಕರೆ ಮಾಡಿದ ತಕ್ಷಣ ಪಶು ವೈದ್ಯರು ಆಂಬುಲೆನ್ಸ್'ನಲ್ಲಿ ಸ್ಕ್ಯಾನಿಂಗ್ ಯಂತ್ರದ ಜೊತೆ ಮನೆ ಬಾಗಿಲಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಎರಡು-ಮೂರು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದರು.
ಪ್ರತಿ ಜಿಲ್ಲೆಗೆ ಒಂದೊಂದು ಸರ್ಕಾರಿ ಗೋ ಶಾಲೆ ಸ್ಥಾಪಿಸಲು ನಿರ್ಧರಿಸಿದ್ದು, ಈಗಾಗಲೇ ಜಾಗ ಸಹ ಗುರುತಿಸಲಾಗಿದೆ. ಗೋ ಶಾಲೆ ಸ್ಥಾಪನೆಯಾದ ನಂತರ ಬಿಡಾಡಿ ದನಗಳನ್ನೆಲ್ಲ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೂರು ತಿಂಗಳಲ್ಲಿ ಅಕ್ರಮ ಗೋ ಸಾಗಾಟ ಕುರಿತು ಅಂದಾಜು 40 ಸಾವಿರದಷ್ಟು ಕರೆಗಳು ಬಂದಿವೆ. ಕರೆಗಳ ಆಧರಿಸಿ ಸಾಕಷ್ಟು ಜಾನುವಾರುಗಳನ್ನು ರಕ್ಷಿಸಲಾಗಿದೆ. ವಿವಿಧೆಡೆ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾಯ್ದೆ ವಿರುದ್ಧ ಕೆಲವರು ಕೋರ್ಟ್'ಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದರಿಂದ ಹೊಸ ಕಾಯ್ದೆ ಜಾರಿಗೆ ತರಲು ಅಡ್ಡಿಯಾಗುತ್ತಿದೆ. ಕೋರ್ಟ್'ಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ ಎಂದರು.
ಎಂಎಸ್ ನಿಷೇಧ ಚರ್ಚೆ ನಡೆದಿದೆ:
ಎಂಇಎಸ್ ನಿಷೇಧ ಕುರಿತು ಚರ್ಚೆ ನಡೆಯುತ್ತಿದೆ. ಮೇಲ್ಮಟ್ಟದಲ್ಲಿ ಏನು ನಿರ್ಧಾರವಾಗುತ್ತದೆ ನೋಡೋಣ. ಮೊದಲು ನಮ್ಮ ಕನ್ನಡ ತಾಯಿ ರಕ್ಷಣೆ ಮಾಡಬೇಕು. ಅದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಕುರಿತು ಅಧಿವೇಶನದಲ್ಲಿಯೂ ಚರ್ಚೆ ನಡೆದಿದೆ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಗೋಶಾಲೆಗೆ ಭೇಟಿ: ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದ ಸಚಿವ ಪ್ರಭು ಚವ್ಹಾಣ, ನಂತರ ಶ್ರೀಮಠದ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲಿಯ ಕುಂದು ಕೊರತೆಗಳ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.