ಮದ್ದೂರು: ‘ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವವರು ಒಬ್ಬರಿಗಿಂತ ಒಬ್ಬರು ಲೂಟಿಕೋರರು’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶನಿವಾರ ಇಲ್ಲಿ ಆರೋಪಿಸಿದರು.
‘ತಾವು ಮಾಡಿರುವ ತಪ್ಪುಗಳಿಂದ ತಪ್ಪಿಸಿಕೊಳ್ಳಲು ವಲಸೆ ಬಂದಿದ್ದಾರೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರ ಹಾಗೂ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಅಲ್ಲ. ಬೇರೆ ಪಕ್ಷಗಳಲ್ಲಿ ಹಲವು ವರ್ಷಗಳಿಂದ ಶಾಸಕರಾಗಿ, ಸಚಿವರಾಗಿದ್ದವರು ಏಕಾಏಕಿ ಬಿಜೆಪಿಗೆ ಬರಲು ಕಾರಣವೇನು’ ಎಂದು ಪ್ರಶ್ನಿಸಿದರು.
‘ಬಿಜೆಪಿಗೆ ಭ್ರಷ್ಟರು, ಜಾತಿವಾದಿಗಳು, ಲೂಟಿಕೋರರು ಬೇಕಾಗಿದ್ದಾರೆಯೇ ಹೊರತು ನನ್ನಂಥ ಪ್ರಾಮಾಣಿಕ ಹೋರಾಟಗಾರ ಬೇಡವಾಗಿದೆ’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.