ಹುಬ್ಬಳ್ಳಿ: ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳದ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ತಾಸು ಧಾರಾಕಾರ ಮಳೆಯಾಗಿದೆ. ಬೈಲಹೊಂಗಲದಲ್ಲಿ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿವೆ. ಬೈಲಹೊಂಗಲ-ಮುನವಳ್ಳಿ ಸಂರ್ಪಕ ಸೇತುವೆ ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಯೂ ಉತ್ತಮ ಮಳೆಯಾಗಿದೆ. ದಾಂಡೇಲಿ, ಶಿರಸಿ, ಜೊಯಿಡಾದಲ್ಲಿ ಸಾಧಾರಣ ಮಳೆ ಬಂದಿದೆ. ಗದಗ ನಗರ ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿ ಸಾಧಾರಣ ಮಳೆಯಾಗಿದೆ.
ಕೊಪ್ಪಳ ಉತ್ತಮ ಮಳೆ
ನಗರದಲ್ಲಿ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚುಕಾಲ ಉತ್ತಮ ಮಳೆಯಾಯಿತು. ಕೇಂದ್ರ ಬಸ್ ನಿಲ್ದಾಣ ಮತ್ತು ವಿವಿಧ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ, ಜನ ತೊಂದರೆ ಅನುಭವಿಸಿದರು.
ಅಳವಂಡಿ, ಹಿಟ್ನಾಳ, ಕುಕನೂರು, ಯಲಬುರ್ಗಾ ಹೋಬಳಿಗಳಲ್ಲಿಯೂ ಬಿರುಸಿನ ಮಳೆಯಾದರೆ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿಯಲ್ಲಿ ಸಾಧಾರಣ ಮಳೆಯಾಯಿತು. ಯಾದಗಿರಿ ನಗರ, ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ತಲಕಾವೇರಿ, ಸಿದ್ದಾಪುರ, ನಾಪೋಕ್ಲು, ಭಾಗಮಂಡಲ ಭಾಗದಲ್ಲಿ ಗುರುವಾರ ತಡರಾತ್ರಿ ಮಳೆಯಾಗಿದೆ.