ಧಾರವಾಡ: ಸ್ವರ ಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಹಿಂದೂಸ್ತಾನಿ ಸಂಗೀತದ ಹಿರಿಯ ಗಾಯಕ ದೆಹಲಿಯ ಪಂ.ಮಧೂಪ್ ಮುದ್ಗಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ₹ 1ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇವರೊಂದಿಗೆ ಬೆಂಗಳೂರಿನ ಹಾರ್ಮೋನಿಯಂ ವಾದಕ ಸತೀಶ್ ಕೊಳ್ಳಿ ಹಾಗೂ ಪುಣೆಯ ಗಾಯಕ ವಿರಾಜ್ ಜೋಶಿ ‘ಯುವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹ 25ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಪಂ.ರಾಜಗುರು ಅವರ 102ನೇ ಜನ್ಮದಿನಾಚರಣೆ ಅಂಗವಾಗಿ ಇದೇ 24ರಂದು ಸಂಜೆ 5.30ಕ್ಕೆ ನಗರದ ಸೃಜನಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದರೊಂದಿಗೆ ಪ್ರಶಸ್ತಿ ಪುರಸ್ಕೃತರ ಸಂಗೀತ ಕಛೇರಿ ಯನ್ನೂ ಆಯೋಜಿಸಲಾಗಿದೆಎಂದು ಪ್ರಕಟಣೆತಿಳಿಸಿದೆ.