ಬೆಂಗಳೂರು: ‘ಶ್ರೀರಾಮನ ಆದರ್ಶ, ತತ್ವ ಸಿದ್ಧಾಂತದಂತೆ ಬಿಜೆಪಿಯು ಜನಪರ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು ಕರಗ ಶಕ್ತ್ಯೋತ್ಸವದ ಪ್ರಯುಕ್ತ ವಿ.ಸೋಮಣ್ಣ ಯುವಪಡೆ ಹಾಗೂ ಗೋವಿಂದರಾಜನಗರ ಮಂಡಳ ಬಿಜೆಪಿ ಹಮ್ಮಿಕೊಂಡಿದ್ದ ಶ್ರೀರಾಮನವಮಿ ಉತ್ಸವ ಹಾಗೂ ಶ್ರೀರಾಮ ರಥಯಾತ್ರೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ರಥಯಾತ್ರೆಯುಟೋಲ್ಗೇಟ್ ಬಳಿಯ ಸರ್ಕಲ್ ಶನಿಮಹಾತ್ಮ ದೇವಸ್ಥಾನದಿಂದ ಆರಂಭವಾಗಿ ಮಾರುತಿ ಮಂದಿರದ ಬಳಿ ಕೊನೆಗೊಂಡಿತು. ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಹೊತ್ತಿದ್ದ ರಥವನ್ನು ಭಕ್ತರು ಆದರದಿಂದ ಬರಮಾಡಿಕೊಂಡರು. ಕಂಸಾಳೆ, ವೀರಗಾಸೆ, ಡೋಲು, ಕೀಲುಕುದುರೆ ಹಾಗೂ ವಿವಿಧ ದೇವರ ವೇಷಭೂಷಣ ತೊಟ್ಟವರು ಎಲ್ಲರನ್ನು ರಂಜಿಸಿದರು.
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ವಿಜಯನಗರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ವಿ.ಕೃಷ್ಣ, ಮುಖಂಡರಾದ ಕೆ.ಉಮೇಶ್ ಶೆಟ್ಟಿ, ಮೋಹನ್ಕುಮಾರ್, ದಾಸೇಗೌಡ, ಆನಂದ್, ರಾಮಪ್ಪ ಇದ್ದರು.