ಬೆಂಗಳೂರು: ಶಾಲೆಗಳಲ್ಲಿ ಶೇ 90 ರಷ್ಟು ವಿದ್ಯಾರ್ಥಿಗಳು ಯಾವ ಧರ್ಮಕ್ಕೆ ಸೇರಿರುತ್ತಾರೋ ಆ ಧರ್ಮದ ಅಂಶಗಳನ್ನು ಒಳಗೊಂಡ ನೈತಿಕ ಪಾಠವನ್ನು ಮುಂದಿನ ವರ್ಷದಿಂದ ಬೋಧಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಂಬರುವ ಶೈಕ್ಷಣಿಕ ವರ್ಷದಿಂದ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಅಲ್ಲದೆ, ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಒಳಗೊಂಡ ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಚಯಿಸಲಾಗುವುದು ಎಂದರು.
‘ಯಾವ ಧರ್ಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವ ವಿಚಾರಗಳನ್ನು ಅಳವಡಿಸುತ್ತೇವೆ.ಯಾವುದನ್ನೆಲ್ಲ ಸೇರಿಸಬೇಕು ಎಂಬುದನ್ನು ತಜ್ಞರ ಸಮಿತಿ ನಿರ್ಣಯಿಸುತ್ತದೆ’ ಎಂದರು.
ರಾಜ್ಯದ ಮದರಸಾಗಳಲ್ಲೂ ಆಧುನಿಕ ಶಿಕ್ಷಣವನ್ನು ನೀಡಬೇಕು ಎಂಬ ಬೇಡಿಕೆ ಪೋಷಕರಿಂದ ಬಂದಿದೆ. ಇಲ್ಲಿ ಓದಿದ ಮಕ್ಕಳಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ ಹೇಳಿದರು.
‘ಆಧುನಿಕ ಶಿಕ್ಷಣ ಆರಂಭಿಸಬೇಕು ಎಂಬ ಬಗ್ಗೆ ಮದರಸಾ ಅಥವಾ ಇತರ ಸಂಸ್ಥೆಗಳಿಂದಾಗಲೀ ಪ್ರಸ್ತಾವನೆ ಬಂದಿಲ್ಲ. ಪೋಷಕರೂ ಮನವಿ ಸಲ್ಲಿಸಿಲ್ಲ. ನಾನು ರಾಜ್ಯದ ವಿವಿಧಡೆ ಭೇಟಿ ನೀಡಿದಾಗ ಪೋಷಕರು ತಾವಾಗಿಯೇ ಆಧುನಿಕ ಶಿಕ್ಷಣದ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಅಧಿಕೃತ ಬೇಡಿಕೆ ಬಂದರೆ ಮಾತ್ರ ಪರಿಶೀಲನೆ ನಡೆಸುತ್ತೇವೆ’ ಎಂದು ನಾಗೇಶ್ ಸ್ಪಷ್ಟಪಡಿಸಿದರು.
1 ನೇ ತರಗತಿಗೆ ಎನ್ಇಪಿ:
ಜೂನ್ನಿಂದ 1 ಮತ್ತು 2 ನೇ ತರಗತಿ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ತರಗತಿಗಳು ನಡೆಯಲಿವೆ. ಕಲಿಕಾ ವಿಧಾನಗಳು ಭಿನ್ನವಾಗಿರುತ್ತವೆ. ಹಾಡು ಮತ್ತು ಕಥೆಗಳ ಮೂಲಕ ಬೋಧನೆ ಮಾಡಲಾಗುತ್ತದೆ ಎಂದೂ ಹೇಳಿದರು.