ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಕಾಯಿಲೆ ಪ್ರಕರಣ: ಕೇಂದ್ರ ಮನವಿ ಒಪ್ಪದ ‘ಸುಪ್ರೀಂ’

ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಕೇಂದ್ರಕ್ಕೆ ಮುಖಭಂಗ
Last Updated 1 ಸೆಪ್ಟೆಂಬರ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಅಪರೂಪದ ಕಾಯಿಲೆಗಳ ವಿಚಾರದಲ್ಲಿ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ವಿಶೇಷ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಮಾಡಿದೆ.

ರಾಜ್ಯದಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 25 ರೋಗಿಗಳ ಚಿಕಿತ್ಸೆಗಾಗಿ ಇಂದಿರಾಗಾಂಧಿ ಮಕ್ಕಳ ಆರೈಕೆ ಕೇಂದ್ರಕ್ಕೆ ಕೇಂದ್ರ ಸರ್ಕಾರ ₹3 ಕೋಟಿ ಹಾಗೂ ರಾಜ್ಯ ಸರ್ಕಾರ ₹2 ಕೋಟಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಏಪ್ರಿಲ್ 23ರಂದು ನಿರ್ದೇಶಿಸಿತ್ತು.

ಕೇಂದ್ರ ಸರ್ಕಾರವು ಹಣ ನೀಡುವ ಬದಲಾಗಿ, ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಿ, ಆರೋಗ್ಯವು ರಾಜ್ಯ ಸರ್ಕಾರಗಳ ಆದ್ಯತೆಯ ವಿಷಯ ಎಂದು ಪ್ರತಿಪಾದಿಸಿತ್ತು.ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್‌ನಂತಹ (ಎಲ್‌ಎಸ್‌ಡಿ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಾವು ಬದುಕಿನ ವಿಚಾರವಿದು ಎಂದು ಹೇಳಿದ್ದ ಹೈಕೋರ್ಟ್, ಜುಲೈ ಮೂರನೇ ವಾರದೊಳಗೆ ಹಣ ಬಿಡುಗಡೆ ಮಾಡದಿದ್ದರೆ, ಈ ಮಕ್ಕಳ ಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿತ್ತು.

ಆಗಸ್ಟ್ 27ರಂದು ಕೇಂದ್ರದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ರಿಜಿಸ್ಟ್ರಿ ಬಳಿ ಮುಂದಿನ ವಿಚಾರಣೆಯ ಹೊತ್ತಿಗೆ ₹3 ಕೋಟಿ ಹಣ ಠೇವಣಿ ಇಡುವಂತೆ ಸೂಚಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ₹2 ಕೋಟಿ ಹಣ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ.

ಇಂಥದೇ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ 2020ರಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮಿಳುನಾಡಿನಲ್ಲಿ ಅಪರೂಪದ ಕಾಯಿಲೆಯಿಂದ ಬಳುತ್ತಿರುವ 11 ಮಕ್ಕಳ ಚಿಕಿತ್ಸೆಗೆ ₹4.4 ಕೋಟಿ ಪಾವತಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಕೇಂದ್ರ ಪ್ರಶ್ನಿಸಿತ್ತು. ಆದರೆ ಕೇಂದ್ರದ ಅರ್ಜಿ ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್, ರಾಷ್ಟ್ರೀಯ ವಿಪತ್ತಿಗೆ ಕಡಿಮೆಯಿಲ್ಲದಂತೆ ಈ ಪ್ರಕರಣವನ್ನು ಪರಿಗಣಿಸುವಂತೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT