ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಗುಣಮುಖರಾದವರಿಗೆ ಮರುಸೋಂಕು: ವರದಿಗೆ ಸೂಚನೆ

Last Updated 7 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದರು.

ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಅವರು, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ 27 ವರ್ಷದ ಮಹಿಳೆಗೆಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು.

‘ಇತರ ರಾಷ್ಟ್ರಗಳಲ್ಲೂ ಈ ರೀತಿಯ ಪ್ರಕರಣಗಳು ಕಂಡುಬಂದಿವೆ. ಇದಕ್ಕೆ ಒಂದೊಂದು ರೀತಿ ಕಾರಣ ಕೇಳಿಬಂದಿವೆ. ನಮ್ಮಲ್ಲೂ ಇಂಥ ಪ್ರಕರಣ ಕಾಣಿಸಿಕೊಂಡಿರುವುದು ಆತಂಕದ ವಿಷಯ. ಇದನ್ನು ಸೂಕ್ಷ್ಮರೀತಿಯಲ್ಲಿ ನಿರ್ವಹಿಸುವ ಮೂಲಕ ಜನರ ಆತಂಕ ದೂರ ಮಾಡಬೇಕು’ ಎಂದರು.

‘ಕೋವಿಡ್‌‌ನಿಂದ ಗುಣಮುಖರಾದವರ ದೇಹದಲ್ಲಿ ಬಿಳಿರಕ್ತ ಕಣ ಮರು ಉತ್ಪಾದನೆಗೆ ಕನಿಷ್ಠ 15 ದಿನ ತೆಗೆದುಕೊಳ್ಳುತ್ತದೆ. ಇದರಿಂದ ಕೆಲವರಿಗೆ ಸೋಂಕು ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ, ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಸಭೆಯಲ್ಲಿದ್ದ ತಜ್ಞರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ನಿಖರತೆ ಬೇಕು. ಇತರ ರಾಜ್ಯಗಳಲ್ಲಿ ಇಂಥ ಪ್ರಕರಣಗಳಲ್ಲಿ ಅಳವಡಿಸಿಕೊಂಡಿರುವ ಚಿಕಿತ್ಸಾ ಕ್ರಮದ ಬಗ್ಗೆಯೂ ಶೀಘ್ರವೇ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಬೂತ್‌ ಮಟ್ಟದ ಸಮಿತಿಗೆ ಜವಾಬ್ದಾರಿ: ‘ಬೂತ್ ಮಟ್ಟದಲ್ಲಿ‌ ಸಮಿತಿ ರಚಿಸಿ, ಜಾಗೃತಿ ಮೂಡಿಸುವುದು ಹಾಗೂ ಪರೀಕ್ಷೆ ನಡೆಸುವುದರಿಂದ ಸುಲಭವಾಗಿ ಕೋವಿಡ್‌ ನಿಯಂತ್ರಣ ಸಾಧ್ಯ. ಈ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ವಹಿಸಿದರೆ ನಿರ್ವಹಣೆ ಸುಲಭ’ ಎಂದೂ ಸಚಿವರು ಅಭಿಪ್ರಾಯಪಟ್ಟರು.

4 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯಕ್ಕೆ ಕೊರೊನಾ ವೈರಾಣು ಕಾಲಿಟ್ಟು ಸೆ.8ಕ್ಕೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಇಲ್ಲಿಯವರೆಗೆ ಸೋಂಕಿಗೆ ಗುರಿಯಾದವರ 4 ಲಕ್ಷ ದಾಟಿದೆ. ಈ ಪೈಕಿಗುಣಮುಖರಾದವರ ಸಂಖ್ಯೆ 3 ಲಕ್ಷಕ್ಕೆ ಏರಿದೆ.

ಸೋಮವಾರ 5,773 ಮಂದಿ ಸೇರಿ ರಾಜ್ಯದಲ್ಲಿ ಒಟ್ಟು 4,04,324 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನ 8,015 ಮಂದಿ ಗುಣಮುಖರಾಗುವುದರೊಂದಿಗೆ ಒಟ್ಟು 3,00,770 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.

11 ದಿನ 1 ಒಂದು ಲಕ್ಷ ಪ್ರಕರಣ

ರಾಜ್ಯದಲ್ಲಿ ಜುಲೈ 27 ರಂದು ಒಂದು ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ 13 ರಂದು ಈ ಸಂಖ್ಯೆ ಎರಡು ಲಕ್ಷ ತಲುಪಿತ್ತು. ಆ ಬಳಿಕ ನಿತ್ಯ ಸರಾಸರಿ 7,500 ಮಂದಿಗೆ ಸೋಂಕು ದೃಢಪಡುತ್ತಿತ್ತು. ಆದರೆ, ಕಳೆದ ಹನ್ನೊಂದೇ ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ.ಆಗಸ್ಟ್‌ನಲ್ಲಿ ಒಂದರಿಂದ ಎರಡು ಲಕ್ಷಕ್ಕೇರಲು 17 ದಿನ ಹಿಡಿದಿತ್ತು. ನಂತರದ13 ದಿನಗಳಲ್ಲಿ ಸೋಂಕು ಪ್ರಕರಣಗಳು ಎರಡು ಲಕ್ಷದಿಂದ ಮೂರು ಲಕ್ಷಕ್ಕೆ ಏರಿಕೆಯಾಗಿದ್ದವು.

13 ದಿನಗಳಲ್ಲಿ ಸಾವಿರ ಸಾವು

ಸೆ.7ರಂದು 141 ಜನ ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಈವರೆಗೆ ಒಟ್ಟು 6,534 ಜನ ಕೋವಿಡ್‌ನಿಂದ ಮೃತಪಟ್ಟಂತಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಾಲಿಟ್ಟು ನಾಲ್ಕೂವರೆ ತಿಂಗಳಿಗೆ (130 ದಿನಕ್ಕೆ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ತಲುಪಿತ್ತು. ಆದರೆ, ಕಳೆದ ಒಂದು ತಿಂಗಳಲ್ಲಿ ( ಜು.27-ಆ.26) 3,213 ಸೋಂಕಿತರ ಸಾವಾಗಿದೆ. ಅಂದರೆ, ನಿತ್ಯ ಸರಾಸರಿ 103 ಸೋಂಕಿತರ ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಪೈಕಿ ಸದ್ಯ 97 ಸಾವಿರ ಜನ ಆಸ್ಪತ್ರೆಗಳಲ್ಲಿ, ಕೋವಿಡ್ ಆರೈಕೆ ಕೇಂದ್ರ ಮತ್ತು ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 794 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 48, ಧಾರವಾಡದಲ್ಲಿ 10, ಕೊಪ್ಪಳದಲ್ಲಿ ತಲಾ 10, ಬೆಳಗಾವಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 8 ಜನ ಸೋಮವಾರ ಮೃತಪಟ್ಟಿದ್ದಾರೆ.

ರಾಜ್ಯಕ್ಕೆ ಕೊರೊನಾ ವೈರಾಣು ಕಾಲಿಟ್ಟು ಸೆ.8ಕ್ಕೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಇಲ್ಲಿಯವರೆಗೆ ಸೋಂಕಿಗೆ ಗುರಿಯಾದವರ 4 ಲಕ್ಷ ದಾಟಿದೆ. ಈ ಪೈಕಿಗುಣಮುಖರಾದವರ ಸಂಖ್ಯೆ 3 ಲಕ್ಷಕ್ಕೆ ಏರಿದೆ.

ಸೋಮವಾರ 5,773 ಮಂದಿ ಸೇರಿ ರಾಜ್ಯದಲ್ಲಿ ಒಟ್ಟು 4,04,324 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನ 8,015 ಮಂದಿ ಗುಣಮುಖರಾಗುವುದರೊಂದಿಗೆ ಒಟ್ಟು 3,00,770 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT