ಶಿವಮೊಗ್ಗ: ’ಒಳಮೀಸಲಾತಿ ವಿಚಾರದಲ್ಲಿ ಯಾರಿಗೇ ಅನ್ಯಾಯವಾಗಿದ್ದರೂ ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತ ಮನಸ್ಸಿನಿಂದ ಇದ್ದಾರೆ. ಹೀಗಾಗಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಇದು ಇಲ್ಲಿಗೆ ನಿಲ್ಲಬೇಕು‘ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಒಳಮೀಸಲಾತಿ ಮೂಲಕ ಎಲ್ಲರಿಗೂ ನ್ಯಾಯ ಒದಗಿಸುವ ವಿಶೇಷ ಪ್ರಯತ್ನ ಸರ್ಕಾರ ಮಾಡಿದೆ. ಅನಗತ್ಯ ವದಂತಿಗಳಿಂದ ಯಾರೂ ಕೂಡ ಪ್ರಚೋದಿತರಾಗಬಾರದು. ಇದು ಎಲ್ಲರಿಗೂ ಲಾಭವಾಗುವಂತಹ ಯೋಜನೆ. ವೈಜ್ಞಾನಿಕವಾಗಿ ಮೀಸಲಾತಿ ಕೊಡುವ ಪ್ರಯತ್ನ ನಡೆದಿದೆ. ಇದನ್ನು ಎಲ್ಲ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು‘ ಎಂದರು.
’ಗಲಾಟೆಯಲ್ಲಿ ಪೊಲೀಸರಿಗೆ ಪೆಟ್ಟು ಬಿದ್ದಿದೆ. ಗಾಯವಾಗಿದೆ. ರಕ್ತ ಹೆಪ್ಪುಗಟ್ಟಿದೆ. ಪೊಲೀಸರಿಗೆ ಹೊಡೆದರೆ ಬಿಡಲು ಆಗುತ್ತದೆಯೇ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ‘ ಎಂದರು.
’ಇದ್ದಕ್ಕಿದ್ದಂತೆಯೇ ಅಮಾಯಕ ಜನರು ಏನೋ ಮಾಡುತ್ತಾರೆ ಎಂದು ಊಹೆ ಮಾಡಲು ಸಾಧ್ಯವಿಲ್ಲ. ಅವರನ್ನು ಪ್ರಚೋದನೆಗೆ ಒಳಪಡಿಸಿ ಕೆಲವೇ ಜನರು ರಾಜಕೀಯ ಉದ್ದೇಶದಿಂದ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳಲು ಕೂಡ ಕೆಲವು ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರ ವಿಚಾರಣೆಯಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಿಕಾರಿಪುರದಲ್ಲಿ ಸೋಮವಾರ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆರಗ ಜ್ಞಾನೇಂದ್ರ ಬಂಜಾರ ಸಮಾಜದವರ ಪ್ರತಿಭಟನೆ ವೇಳೆ ನಡೆದ ಸಂಗತಿಗಳು ಹಾಗೂ ತನಿಖೆಯ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.