ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ನೀರು ನೇರ ಸೇವನೆಗೆ ಅಯೋಗ್ಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ: ಕುಸಿಯುತ್ತಿರುವ ಗುಣಮಟ್ಟ
Last Updated 24 ಜನವರಿ 2023, 22:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರಮುಖ ಜೀವನದಿಗಳೆನಿಸಿರುವ ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ಯಾವುದೇ ನದಿಗಳ ನೀರನ್ನು ಸಂಸ್ಕರಿಸದೇ ಕುಡಿಯುವಂತಿಲ್ಲ. ಕೆಲವು ನದಿಗಳ ನೀರು ಸ್ನಾನಕ್ಕೂ ಬಳಸಲಾಗದ ಸ್ಥಿತಿ ತಲುಪಿವೆ.

ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ‌ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ.

ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ನೀರಿನ ಮಾದರಿ ಸಂಗ್ರಹಿಸಿ, ಅಧ್ಯಯನ ನಡೆಸಿ ಗುಣಮಟ್ಟವನ್ನು ದಾಖಲಿಸುತ್ತದೆ. ಐದು ವರ್ಗಗಳಲ್ಲಿ ನೀರಿನ ಮಟ್ಟವನ್ನು ಗುರುತಿಸಲಾಗಿದೆ. ಬೀದರ್‌ನಲ್ಲಿ ಮಾತ್ರ ಕಾರಂಜಾ ನದಿಯ ಮಾದರಿ ಸಂಗ್ರಹಿಸದ ಕಾರಣ, ಆ ಸ್ಥಳದ ಕುರಿತಾದ ವರದಿ ಲಭ್ಯವಿಲ್ಲ.

ಧರ್ಮಸ್ಥಳದಲ್ಲಿ ಹರಿಯುವ ನೇತ್ರಾವತಿ ನದಿ ನೀರು ಅಕ್ಟೋಬರ್‌ ನಲ್ಲಿ ಸ್ನಾನಕ್ಕೆ ಯೋಗ್ಯವಾಗಿತ್ತು. ಆದರೆ, ನವೆಂಬರ್‌ ವರದಿಯಲ್ಲಿ ಕಲ್ಮಶ ಹೆಚ್ಚಾಗಿದ್ದು, ‘ಬಿ’ ವರ್ಗದಿಂದ ‘ಸಿ’ ವರ್ಗಕ್ಕೆ ಕುಸಿದಿದೆ. ಪರಿಣಾಮ, ಹೊರಾಂಗಣದಲ್ಲಿ ಈ ನೀರು ಸ್ನಾನಕ್ಕೂ ಯೋಗ್ಯವಲ್ಲವೆಂದು ವರದಿ ಹೇಳಿದೆ.

ಮಂಗಳೂರು ಸಮೀಪದ ಉಪ್ಪಿನಂಗಡಿಯಲ್ಲಿ ನೇತ್ರಾವತಿಗೆ ಸೇರುವ ಮುನ್ನ ಕುಮಾರಧಾರಾ ನದಿ, ಕಲಬುರಗಿಯಲ್ಲಿ ಕಾಗಿಣಾ ನದಿ, ಸುವರ್ಣವತಿ ಜಲಾಶಯದ ನೀರು ಚಾಮರಾಜನಗರದ ಅಟ್ಟಿಗುಲ್ಲಿಪುರ, ಭದ್ರಾ ನದಿಯ ನೀರು ಭದ್ರಾವತಿ ಎಂಪಿಎಂ ಬಳಿ ಕಲ್ಮಶ ಹೆಚ್ಚಿಸಿ ಕೊಂಡು ‘ಬಿ’ ವರ್ಗದಿಂದ ‘ಸಿ’ ವರ್ಗಕ್ಕೆ ಕುಸಿದಿವೆ.

ರಾಮನಗರದಲ್ಲಿ ಸಂಗಮ ಹಾಗೂ ಕನಕಪುರದಲ್ಲಿ ಅರ್ಕಾವತಿ, ಸಂಗಮದಲ್ಲಿ ಕಾವೇರಿ, ಕಲಬುರಗಿಯ ಸೇಡಂ, ಶಹಾಬಾದ್‌ ಸೇತುವೆ ಹಾಗೂ ಬೆಣ್ಣೆತೊರಾ ಜಲಾಶಯದಲ್ಲಿ ಕಾಗಿಣಾ, ಜೇವರ್ಗಿ, ಫಿರೋಜಾಬಾದ್‌, ಗಾಣಗಾಪುರದಲ್ಲಿ ಭೀಮಾ, ಮೈಸೂರಿನ ಕಟ್ಟೆಮಳಲವಾಡಿ ಹಾಗೂ ಹುಣಸೂರು ನಗರದಲ್ಲಿ ಲಕ್ಷ್ಮಣತೀರ್ಥ, ದಾವಣಗೆರೆಯ ಹರಿಹರದಲ್ಲಿ ತುಂಗ ಭದ್ರಾ, ತುಮಕೂರಿನ ಎಡೆಯೂರು ಬಳಿ ಶಿಂಷಾ ನದಿ ನೀರು ವನ್ಯಜೀವಿಗಳು ಕುಡಿಯಲು ಹಾಗೂ ಮೀನುಗಾರಿಕೆಗೆ ಮಾತ್ರ ಯೋಗ್ಯವಾಗಿವೆ. ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿ ‘ಇ’ ವರ್ಗದಲ್ಲಿದ್ದು, ಲೋಹಯುಕ್ತ, ಕಲ್ಮಶಕಾರಕವಾಗಿದೆ.

ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ. ಅಷ್ಟೇ ಅಲ್ಲ, ಸಾಮಾನ್ಯ ಸಂಸ್ಕರಣೆ ಮಾಡಿಯೂ ಕುಡಿಯಬಹುದಾದ ಜಲಮೂಲ ಈಗ ಇಲ್ಲವಾಗಿದೆ ಎಂಬುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಉಲ್ಲೇಖಿಸಿದೆ.

ಕೆರೆ ಕಲ್ಮಶ: ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳ 69 ಕೆರೆಗಳ ನೀರಿನ ಗುಣಮಟ್ಟ ಪರೀಕ್ಷಿಸಿದ್ದು, ಇದರಲ್ಲೂ ‘ಎ’ ವರ್ಗ ಕೆರೆಗಳು ಯಾವುದೂ ಇಲ್ಲ. ರಾಮನಗರದ ಬೈರಮಂಗಲ ಹಾಗೂ ರಾಮಮ್ಮನ ಕೆರೆ, ತುಮಕೂರಿನ ಮೇಳೆಕೋಟೆ, ಭೀಮಸಂದ್ರ ಕೆರೆ, ಮೈಸೂರಿನ ದಳವಾಯಿ, ಎಣ್ಣೆಹೊಳೆ ಕೆರೆ, ಹಾಸನ ಮಾಕನ, ಹಾವಲಿ ಕೆರೆಗಳು ‘ಇ’ ವರ್ಗದಲ್ಲಿವೆ. ‘ಬಿ’ ವರ್ಗದಲ್ಲಿ 5, ‘ಸಿ’ ವರ್ಗದಲ್ಲಿ 18 ಮತ್ತು ‘ಡಿ’ ವರ್ಗದಲ್ಲಿ 32 ಕೆರೆಗಳಿವೆ.

ಬೆಂಗಳೂರಿನ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಯೋಗ್ಯ!

ಬೆಂಗಳೂರು ನಗರದ 106 ಕೆರೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಮತ್ತು ಮೀನುಗಾರಿಕೆಗೆ ಯೋಗ್ಯ. ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿಕೊಂಡು ಕಲ್ಮಶದ ತಾಣವಾಗಿವೆ.

ರಾಜರಾಜೇಶ್ವರಿನಗರ ವ್ಯಾಪ್ತಿಯ ಸುಬ್ರಮಣ್ಯಪುರ, ಮಲ್ಲತ್ತಹಳ್ಳಿ, ದೊರೆಕೆರೆ, ಹೊಸಕೆರೆಹಳ್ಳಿ, ಶಿವಪುರ, ಕರಿಹೋಬನಹಳ್ಳಿ, ದಾಸರಹಳ್ಳಿ ವ್ಯಾಪ್ತಿಯ ಗಂಗೊಂಡನಹಳ್ಳಿ, ಅಂದ್ರಹಳ್ಳಿ, ಕಾಚೋಹಳ್ಳಿ, ವಿಶ್ವನೀಡಂ, ಮಾಚೋಹಳ್ಳಿ, ದೊಡ್ಡಬಿದರಕಲ್ಲು, ಬೊಮ್ಮನಹಳ್ಳಿ ವ್ಯಾಪ್ತಿಯ ಮಡಿವಾಳ, ಹುಳಿಮಾವು, ಸಿಂಗಸಂದ್ರ, ಪರಪ್ಪನ ಅಗ್ರಹಾರ, ಹರಳೂರು, ಮಹದೇವಪುರ ವ್ಯಾಪ್ತಿಯ ಕಲ್ಕೆರೆ, ಸಾದರಮಂಗಲ, ಗರುಡಾಚಾರ್ ಪಾಳ್ಯ, ರಾಂಪುರ, ವಿಭೂತಿಪುರ, ಯಲಹಂಕ ವ್ಯಾಪ್ತಿಯ ಚೆಲ್ಲಕೆರೆ, ಸಿಂಗಾಪುರ, ನರಸೀಪುರ, ರಾಚೇನಹಳ್ಳಿ, ಕೋಗಿಲು, ಪೂರ್ವ ಭಾಗದ ಹಲಸೂರು, ಬೈರಸಂದ್ರ ಕೆರೆಗಳು ಲೋಹಯುಕ್ತ ಕಲ್ಮಶದ ತಾಣಗಳಾಗಿವೆ. ಎ,ಬಿ,ಸಿ ವರ್ಗದಲ್ಲಿ ಯಾವುದೇ ಕೆರೆಗಳಿಲ್ಲ. ‘ಡಿ’ ವರ್ಗದಲ್ಲಿ 66 ಹಾಗೂ ‘ಇ’ ವರ್ಗದಲ್ಲಿ 40 ಕೆರೆಗಳಿವೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ‘ಇ’ ವರ್ಗದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT