ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು ಸೂಕ್ತ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ, ವೀರಶೈವರಲ್ಲಿಯೂ ಬಡವರು, ಶೋಷಿತರು ಇದ್ದಾರೆ. ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಇಂತಹವರ ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗೆ ಮೀಸಲಾತಿ ನೀಡಿ’ ಎಂದು ಪ್ರತಿಪಾದಿಸಿದರು.
‘ಲಿಂಗಾಯತ – ವೀರಶೈವರಿಗೆ ಮೀಸಲಾತಿ ನೀಡುವ ಬಗ್ಗೆ ಗಹನ ಚರ್ಚೆ ಮಾಡಬೇಕಿದೆ. ಮೀಸಲಾತಿ ನಿಗದಿಪಡಿಸಿ ಸರ್ಕಾರ ನಿರ್ಣಯ ಕೈಗೊಂಡರೆ ಸಮುದಾಯದ ಲಕ್ಷಾಂತರ ಯುವ ಸಮೂಹಕ್ಕೆ ಅನುಕೂಲವಾಗಲಿದೆ. ಈ ಕುರಿತು ಸರ್ಕಾರ ಕೂಡಲೇ ನಿರ್ಧಾರಕ್ಕೆ ಬರಲಿ’ ಎಂದು ಒತ್ತಾಯಿಸಿದರು.