ಚಿತ್ರದುರ್ಗ/ಬಾಗಲಕೋಟೆ: ‘ವಿಧಾನಸಭೆಗೆ ಮೈಸೂರಿನ ವರುಣಾ ಸೇರಿದಂತೆ ರಾಜ್ಯದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಕುಟುಂಬದ ಸದಸ್ಯರು ಸಲಹೆ ನೀಡಿದ್ದಾರೆ. ವರುಣಾದಿಂದ ಟಿಕೆಟ್ ನೀಡಲು ಹೈಕಮಾಂಡ್ ಅನ್ನು ಕೋರಿದ್ದೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬಾದಾಮಿಗೆ ತೆರಳುವ ಮುನ್ನ ಚಿತ್ರದುರ್ಗದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಚಿತ್ರದುರ್ಗ ಸೇರಿ ರಾಜ್ಯದ 25 ಕ್ಷೇತ್ರಗಳಿಂದ ಮುಖಂಡರು ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ನಾನು ವರುಣಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ದು, ಈ ಕುರಿತ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು’ ಎಂದು ತಿಳಿಸಿದರು.
ಬಾಗಲಕೊಟೆ ಜಿಲ್ಲೆಯ ಬಾದಾಮಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಜೆ ಚಾಲನೆ ನೀಡಿದ ಅವರು, ‘ಬಾದಾಮಿಯಲ್ಲಿ ಸ್ಪರ್ಧಿಸಿ ಎಂದು ಹೈಕಮಾಂಡ್ ಹೇಳಿದರೆ ಸ್ಪರ್ಧಿಸುತ್ತೇನೆ‘ ಎಂದರು.
‘ವರುಣಾ, ಬಾದಾಮಿ ಎರಡೂ ಕಡೆ ಸ್ಪರ್ಧಿಸಿ’ ಎಂದು ಅಭಿಮಾನಿಗಳು ಆಗ್ರಹಿಸಿದರು. ‘ಆಗ, ಎರಡು ಕಡೆ ಸ್ಪರ್ಧಿಸುವ ಇಂಗಿತವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ನೀವು ಚಾಲುಕ್ಯರ ನಾಡಿನಿಂದಲೇ ಗೆದ್ದು ಮುಖ್ಯಮಂತ್ರಿ ಆಗಬೇಕು’ ಎಂದು ಬೆಂಬಲಿಗರು ಆಗ್ರಹಿಸಿದಾಗ, ‘ನಾನು ಮುಖ್ಯಮಂತ್ರಿ ಆಗಲು ಮೊದಲು ನೀವು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಬೇಕು. ನಾನು ಇಲ್ಲಿಂದ ಸ್ಪರ್ಧಿಸಲಿ, ಬಿಡಲಿ, ಎಂದೆಂದಿಗೂ ನಿಮ್ಮವನೇ. ನೀವು ನಮ್ಮವರು’ ಎಂದು ಭಾವುಕರಾದರು.
‘ಚಾಮುಂಡೇಶ್ವರಿಯಲ್ಲಿ ಐದು ಬಾರಿ ಗೆದ್ದು ಅಭಿವೃದ್ಧಿಪಡಿಸಿದ್ದರೂ ಅಲ್ಲಿನವರು ಕೈಬಿಟ್ಟರು. ನೀವು ಕೈಹಿಡಿದು ರಾಜಕೀಯ ಶಕ್ತಿ ತುಂಬಿದಿರಿ. ಬಾದಾಮಿ ಕ್ಷೇತ್ರದ ಜನರಿಗೆ ಕೋಟಿ ನಮನಗಳು. ಜೀವನದಲ್ಲಿ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ಎಷ್ಟೇ ಕೆಲಸ ಮಾಡಿದರೂ ಋಣ ತೀರಿಸಲಾಗದು‘ ಎಂದು ಹೇಳಿದರು.
ಸಿದ್ದರಾಮಯ್ಯ ಮಾತನಾಡುವಾಗ, ‘ಬಾದಾಮಿ ಯಿಂದಲೇ ಸ್ಪರ್ಧಿಸಬೇಕು’ ಎಂಬ ಕೂಗು ಜೋರಾಯಿತು. ಕೆಲ ಮುಖಂಡರು ವೇದಿಕೆಯೇರಿ, ಕುಳಿತು ಒತ್ತಾಯಿಸಿದರು. ‘ನೀವು ಸುಮ್ಮನಿರದಿ ದ್ದರೆ, ಭಾಷಣ ನಿಲ್ಲಿಸಬೇಕಾಗುತ್ತದೆ’ ಎಂದು ಅವರನ್ನು ಸಿದ್ದರಾಮಯ್ಯ ಗದರಿದರು. ಕೊನೆಯಲ್ಲಿ ಅಭಿಮಾನಿಯೊಬ್ಬರು ಕೈ ಕುಯ್ದುಕೊಳ್ಳಲು ಮುಂದಾದಾಗ ಪೊಲೀಸರು ತಡೆದರು.
‘ರಕ್ತದಲ್ಲಿ ಪತ್ರ ಬರೆದು ಒತ್ತಾಯ’: ‘ಬಾದಾಮಿ ಯಿಂದ ಸ್ಪರ್ಧಿಸಬೇಕು. ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ. ಅದಕ್ಕೆ ನೀವು ಮತ್ತು ಹೊಳೆಬಸು ಶೆಟ್ಟರ್ ಹೊಣೆ. ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಗುಳೇದಗುಡ್ಡ ಪುರಸಭೆ ಸದಸ್ಯೆ ವಂದನಾ ಗೊಪಾಲ ಭಟ್ಟದ ರಕ್ತದಲ್ಲಿ ಬರೆದಿರುವ ಪತ್ರವನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು.
ಟಿಕೆಟ್ ಬೇಡಿಕೆ ವೇಳೆ ತಳ್ಳಾಟ: ಕಪಾಳಮೋಕ್ಷ
ಬೆಂಗಳೂರು: ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಜಮಾಯಿಸಿದ್ದ ವೇಳೆ ಉಂಟಾದ ತಳ್ಳಾಟ ಕಂಡು ಸಿಟ್ಟಿಗೆದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಶುಕ್ರವಾರ ನಡೆಯಿತು.
ಟಿಕೆಟ್ಗಾಗಿ ಲಾಬಿ ನಡೆಸಲು ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮತ್ತು ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್. ಶಂಕರ್ ಬೆಂಬಲಿಗರು ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ಅವರ ಮನೆ ಬಳಿ ಜಮಾಯಿಸಿದ್ದರು. ರಾಮಪ್ಪ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಜಮಾಯಿಸಿ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಮತ್ತೊಂದು ಕಡೆ ಆರ್. ಶಂಕರ್ ಬೆಂಬಲಿಗರು ಕೂಡಾ ಇದ್ದರು. ಸಿದ್ದರಾಮಯ್ಯ ಅಲ್ಲಿಗೆ ಬರುತ್ತಿದ್ದಂತೆ ತಳ್ಳಾಟ ಉಂಟಾಗಿತ್ತು.
ಆರ್. ಶಂಕರ್ ಬೆಂಬಲಿಗರು ಸಿದ್ದರಾಮಯ್ಯ ಮನೆಗೆ ಬಂದಿರುವುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಸೇರಲು ಶಂಕರ್ ಯತ್ನಿಸುತ್ತಿದ್ದು, ಅದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯಿದೆ. ಈ ನಡುವೆ ಅವರ ಬೆಂಬಲಿಗರು ಸಿದ್ದರಾಮಯ್ಯ ಮನೆಯಲ್ಲಿ ಜಮಾಯಿಸಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ.
ಘಟನೆಯ ವಿಡಿಯೊ ತುಣುಕು ಹಂಚಿಕೊಂಡ ಬಿಜೆಪಿ: ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಿಜೆಪಿ ಟ್ವೀಟ್ ಮಾಡಿದೆ. ಶಾದಿ ಭಾಗ್ಯದ ನಾಯಕ ಸಿದ್ದರಾಮಯ್ಯ ಅವರಿಂದ ಕಪಾಳಮೋಕ್ಷ ಭಾಗ್ಯ ಎಂದು ಕುಟುಕಿದೆ.
ವರುಣಾದಿಂದ ಸ್ಪರ್ಧೆ: ವರಿಷ್ಠರ ವಿವೇಚನೆಗೆ –ವಿಜಯೇಂದ್ರ
ಮೈಸೂರು: ‘ವರುಣಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ಕುರಿತು ಅಮಿತ್ ಶಾ ಅವರೊಂದಿಗೆ ಚರ್ಚಿಸಿಲ್ಲ. ಸ್ಪರ್ಧೆ ಬಗ್ಗೆ ರಾಜ್ಯ, ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ತಿಳಿಸಿದರು.
‘ಕಾರ್ಯಕರ್ತರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಮೋರ್ಚಾಗಳ ಸಮಾವೇಶದ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಅಮಿತ್ ಶಾ ಅವರು ಮನೆಗೆ ಉಪಾಹಾರಕ್ಕೆ ಬಂದಿದ್ದ ವೇಳೆ, ವರುಣಾ ಸೇರಿದಂತೆ ಕೆಲವು ಕ್ಷೇತ್ರಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದರು. ಎಷ್ಟು ಜಿಲ್ಲೆಗಳಿಗೆ ಹೋಗಿದ್ದೀಯಾ ಎಂದು ಕೇಳಿದ್ದರು. ಆ ಬಗ್ಗೆ ವರದಿ ನೀಡಿರುವೆ. ಫಲಾನುಭಾವಿಗಳ ಸಮಾವೇಶ, ವಿಜಯಸಂಕಲ್ಪ ಯಾತ್ರೆ ಬಗ್ಗೆ ಅವರಿಗೆ ತೃಪ್ತಿ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.