ವರದಿ ಸಿದ್ಧಗೊಂಡ ಬಳಿಕ ಎಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ, ಸಮ್ಮಿಶ್ರ (ಜೆಡಿಎಸ್– ಕಾಂಗ್ರೆಸ್) ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್. ಕುಮಾರಸ್ವಾಮಿ ಅವರನ್ನು 3–4 ಬಾರಿ ಭೇಟಿ ಮಾಡಿ ವರದಿ ಸ್ವೀಕರಿಸುವಂತೆ ಮನವಿ ಮಾಡಿತ್ತು. ಆದರೆ, ಅವರು ಉತ್ಸುಕತೆ ತೋರಿಸಿರಲಿಲ್ಲ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರನ್ನೂ ಆಯೋಗದ ಸದಸ್ಯರು ಭೇಟಿ ಮಾಡಿದ್ದರು. ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್ ಅವರ ಬಳಿಯೂ ವರದಿ ಸಲ್ಲಿಸುವ ಬಗ್ಗೆ ಚರ್ಚಿಸಿದ್ದರು. ಕೊನೆಗೆ, ತಮ್ಮ ಅಧಿಕಾರ ಅವಧಿ ಮುಗಿಯತ್ತಿದ್ದಂತೆ (2019 ಸೆ. 22) ವರದಿಯನ್ನು ಆಯೋಗದ ಸದಸ್ಯ ಕಾರ್ಯದರ್ಶಿಯ ಕೈಗೊಪ್ಪಿಸಿ ಆಯೋಗ ಸದಸ್ಯರು ಕೈ ತೊಳೆದುಕೊಂಡರು.