ಬೆಂಗಳೂರು: ‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಬಗ್ಗೆ ತಮ್ಮ ಅನುಪಸ್ಥಿತಿಯಲ್ಲಿ ನಡೆಸಿರುವ ತನಿಖೆಗೆ ಬದ್ಧನಾಗಿದ್ದೇನೆ’ ಎಂದು ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ತನಿಖಾ ವರದಿಯನ್ನು ವೈದ್ಯಕೀಯ ರಜೆಯಲ್ಲಿದ್ದ ಸೌಮೇಂದು ಮುಖರ್ಜಿ ಅನುಮೋದಿಸಿರಲಿಲ್ಲ. ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ವರದಿ ಸ್ವೀಕರಿಸಲು ನಿರಾಕರಿಸಿತ್ತು.
‘ಎಸ್ಐಟಿ ಮುಖ್ಯಸ್ಥರು ಇಲ್ಲದಿದ್ದರೂ ತನಿಖೆಯನ್ನು ಸಮರ್ಪಕವಾಗಿ ನಡೆಸಲಾಗಿದೆ. ವರದಿ ಸಲ್ಲಿಸಲು ಸಂದೀಪ್ ಪಾಟೀಲ ಅವರಿಗೆ ಸೌಮೇಂದು ಮುಖರ್ಜಿ ಅವರು ಅಧಿಕಾರ ನೀಡಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ತಿಳಿಸಿದರು.
ಎಸ್ಐಟಿ ಸಲ್ಲಿಸಿದ ಹೆಚ್ಚುವರಿ ಹೇಳಿಕೆ ಪರಿಶೀಲಿಸಿದ ಪೀಠ, ‘ಅನುಪಸ್ಥಿತಿಯಲ್ಲಿ ನಡೆದ ತನಿಖೆ ಸರಿಯಾಗಿದೆಯೇ ಎಂಬುದನ್ನು ಅವರು ಪರಿಶೀಲಿಸಿದ್ದಾರೆಯೇ, ಸರಿಯಾಗಿ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆಯೇ’ ಎಂದು ಪ್ರಶ್ನಿಸಿತು.
‘ತನಿಖೆಗೆ ಬದ್ಧ ಎಂದು ಅವರು ಒಪ್ಪಿಗೆ ಸೂಚಿಸಿದ್ಧಾರೆ’ ಎಂದು ವಕೀಲರು ವಿವರಿಸಿದರು. ವಿಚಾರಣೆಯನ್ನು ಪೀಠ ಸೆ.3ಕ್ಕೆ ಮುಂದೂಡಿತು.