ಕಲಬುರ್ಗಿ: ಗಡಿ ವಿವಾದಕ್ಕೆ ಸಂಬಂಧಿಸಿ ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಜಿಲ್ಲೆಯ ಆಳಂದ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ, ಬಸ್ ಮೇಲೆ ಕನ್ನಡ ಧ್ವಜ ಹಾರಿಸಲಾಯಿತು. ಸೊಲ್ಲಾಪುರ, ಅಕ್ಕಲಕೋಟ, ಜತ್ತ ಸೇರಿದಂತೆ ಹಲವು ಪಟ್ಟಣಗಳು ಕನ್ನಡಕ್ಕೆ ಸೇರಿದವು ಎನ್ನುವ ಫಲಕ ಬಸ್ಗೆ ಅಂಟಿಸಲಾಯಿತು. ನಂತರ ಬಸ್ಗೆ ಮಸಿ ಬಳಿದು ಘೋಷಣೆ ಕೂಗಲಾಯಿತು.
ರವಿ ದೇಗಾಂವ ಮಾತನಾಡಿ, ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮರಾಠಿ ಭಾಷಿಕರ ಓಲೈಕೆಗಾಗಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡದಿರಲಿ. ಬೆಳಗಾವಿ ವಿಷಯಕ್ಕೆ ಬಂದರೆ ಸೊಲ್ಲಾಪುರ, ಅಕ್ಕಲಕೋಟ, ಜತ್ತ, ಸಾಂಗಲಿ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು ಎಂದು ಕನ್ನಡಿಗರು ಕೇಳಬೇಕಾಗುತ್ತದೆ‘ ಎಂದರು.