ಮಂಗಳೂರು: ಭೋಪಾಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಯೋಧ ಮುರಳೀಧರ್ ಬಿ.ಎಸ್.( 37) ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಯಿಯ ಮೊದಲ ವರ್ಷದ ಪುಣ್ಯತಿಥಿಯಲ್ಲಿ ಭಾಗವಹಿಸಲು ಊರಿಗೆ ಮರಳಲು ಸಿದ್ಧತೆಯಲ್ಲಿದ್ದ ಅವರಿಗೆ ಹೃದಯಾಘಾತವಾಗಿತ್ತು.
ಮುರಳೀಧರ್ ಅವರ ತಾಯಿ ವರ್ಷದ ಹಿಂದೆ ತೀರಿ ಹೋಗಿದ್ದು, ಅವರ ಮೊದಲ ವರ್ಷದ ಪುಣ್ಯತಿಥಿಯಲ್ಲಿ ಭಾಗವಹಿಸುವ ಸಲುವಾಗಿ ಅವರು ಕೆಲವೇ ದಿನಗಳಲ್ಲಿ ಊರಿಗೆ ಮರಳುವವರಿದ್ದರು. ಈ ಸಲುವಾಗಿ ಅವರಿಗೆ 20 ದಿನಗಳ ರಜೆಯೂ ಮಂಜೂರಾಗಿತ್ತು. ಊರಿಗೆ ಮರಳಲು ತಯಾರಿ ನಡೆಸುತ್ತಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ’ ಎಂದು ಅವರ ಕುಟುಂಬದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಮುರಳೀಧರ್ ಅವರಿಗೆ ಪತ್ನಿ ಉಷಾಕಿರಣ್ ಇದ್ದಾರೆ. ದಂಪತಿಗೆ 7 ತಿಂಗಳ ಮಗು (ನಿಹಾನ್) ಇದೆ. ಮಗು ಹುಟ್ಟಿದಾಗ ಆರು ತಿಂಗಳ ಹಿಂದೆ ಅವರು ಊರಿಗೆ ಬಂದಿದ್ದರು’ ಎಂದು ಅವರು ಮಾಹಿತಿ ನೀಡಿದರು.
ಮುರಳೀಧರ್ ಅವರು ನಗರದ ಪದವು ಗ್ರಾಮದ ಶಕ್ತಿನಗರದ ಮೊಗರೋಡಿಯವರು. ಸಶಸ್ತ್ರ ಸೀಮಾ ಪಡೆಯನ್ನು (ಎಸ್ಎಸ್ಬಿ) 2007ರಲ್ಲಿ ಸೇರಿದ್ದ ಅವರು ಭೋಪಾಲ್ನಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮುರಳೀಧರ್ ಅವರ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಮದನ್ಮೋಹನ್ ಹಾಗೂ ಇತರರು ಬಜಪೆಯ ವಿಮಾನನಿಲ್ದಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಿದರು.
‘ಮುರಳೀಧರ ಅವರ ಪಾರ್ಥೀವ ಶರೀರ ಮಂಗಳವಾರ ನಗರವನ್ನು ತಲುಪಿದ್ದು, ಜಿಲ್ಲಾಡಳಿತದಿಂದ ಅವರಿಗೆ ಗೌರವಗಳನ್ನು ಸಲ್ಲಿಸಿದ್ದೇವೆ. ಪಾರ್ಥೀವ ಶರೀರವನ್ನು ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇದೇ 25ರಂದು (ಬುಧವಾರ) ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.