ಕೆಜಿಎಫ್: ಸುಮಾರು 1.20 ಲಕ್ಷ ಲೀಟರ್ ಸ್ಪಿರಿಟ್ನ್ನು ಅಕ್ರಮವಾಗಿ ನಾಲ್ಕು ಟ್ಯಾಂಕರ್ಗಳಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಅಬಕಾರಿ ದಳದ ಸಿಬ್ಬಂದಿ ಮಂಗಳವಾರ ರಾತ್ರಿ ರಾಜ್ಯದ ಗಡಿಯಲ್ಲಿ ಪತ್ತೆ ಹಚ್ಚಿದ್ದಾರೆ.
ವಶಪಡಿಸಿಕೊಂಡಿರುವ ಸ್ಪಿರಿಟ್ನ ಮೌಲ್ಯ ಸುಮಾರು ₹1.39ಕೋಟಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ನ್ಯೂಟ್ರಲ್ ಸ್ಪಿರಿಟ್ ಎಂದು ಹೇಳಲಾಗುವ ಸ್ಪಿರಿಟ್ನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ರಾಜ್ಯದ ಗಡಿ ಭಾಗದಲ್ಲಿರುವ ಪಂತರ ಹಳ್ಳಿ ಪೆಟ್ರೋಲ್ ಬಂಕ್ ಬಳಿ ನಾಲ್ಕು ಮಹೀಂದ್ರ ಟ್ಯಾಂಕರ್ ಗಳನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು ರಹದಾರಿಯಿಲ್ಲದೆ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಕಾರಣದಿಂದಾಗಿ ವಶಪಡಿಸಿಕೊಂಡರು. ಈ ಸಂಬಂಧ ನವಾಜಾ ಜಾನಿ, ಗೋಪಾಲ ರಾವ್, ರಮೇಶ್ ಮತ್ತು ವೀರಾಂಜನೇಯಲು ಎಂಬುವರನ್ನು ಬಂಧಿಸಲಾಗಿದೆ.