ಬೆಂಗಳೂರು: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿ ವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ನೀಡಿರುವ ₹2 ಕೋಟಿ ಅನುದಾನದಲ್ಲಿ ಕನಿಷ್ಠ ಶೇ 25 ರಷ್ಟನ್ನು ಕೋವಿಡ್ ನಿರ್ವಹಣೆಗೆ ಅಗತ್ಯ ಇರುವ ಪರಿಕರ ಮತ್ತು ಆಸ್ಪತ್ರೆಗಳ ಸುಧಾರಣೆಗೆ ಬಳಸಲು ಸರ್ಕಾರ ಅನುಮತಿ ನೀಡಿದೆ.
ಹಲವು ಶಾಸಕರು ಈ ಸಂಬಂಧ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಕೋವಿಡ್ಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಕೊಡಲು ಸಾಧ್ಯವಾಗುತ್ತದೆ. ಆಮ್ಲಜನಕ ಸಾಂದ್ರಕಗಳು, ಹಾಸಿಗೆ ವ್ಯವಸ್ಥೆ ಸೇರಿ ವಿವಿಧ ರೀತಿಯ ಕಾರ್ಯಗಳನ್ನು ಈ ಅನುದಾನದ ಮೂಲಕ ಮಾಡಬಹುದಾಗಿದೆ.
ಶಾಸಕರು ಶೇ 25 ರಷ್ಟು ಹಣವನ್ನು ಬಳಸಬಹುದಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ಒಟ್ಟು ಮೊತ್ತ ₹600 ಕೋಟಿ ಆಗುತ್ತದೆ. ಇದರಲ್ಲಿ ಶೇ 25ರಷ್ಟು ಎಂದರೆ ₹150 ಕೋಟಿಯಷ್ಟಾಗಲಿದೆ.