ಮಡಿಕೇರಿ: ‘ನಾನು ಮೈಸೂರು – ಕೊಡಗು ಸಂಸದ ಎಂಬ ಬಗ್ಗೆ ಜನರಿಗೆ ಯಾವುದೇ ಗೊಂದಲವಿಲ್ಲ. ಆದರೆ, ಮಂಡ್ಯ ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಇದ್ದಾರೋ? ಇಲ್ಲವೋ? ಎಂಬ ಬಗ್ಗೆಯೇ ಜನರಿಗೇ ಗೊಂದಲವಿದೆ’ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.
‘ಪ್ರತಾಪ ಸಿಂಹ ಮೈಸೂರು ಸಂಸದರೋ ಅಥವಾ ಮಂಡ್ಯ ಸಂಸದರೋ’ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮೈಸೂರಿನಲ್ಲೇ ನೆಲೆಸಿದ್ದೇನೆ. ಕ್ಷೇತ್ರದಾದ್ಯಂತ ಸಂಚಾರ ನಡೆಸಿ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದ್ದೇನೆ. ಮತ ಹಾಕಿದವರಿಗೇಮಂಡ್ಯದ ಸಂಸದರ ಬಗ್ಗೆ ಗೊಂದಲವಿದೆ’ ಎಂದರು.
‘ಕೆಆರ್ಎಸ್ ಬಿರುಕು ಬಿಟ್ಟಿದೆ ಎಂದು ಹೇಳುವ ಮೊದಲು ಪರಿಶೀಲಿಸಬೇಕಿತ್ತು. ಮಾಹಿತಿ ತಪ್ಪಾಗಿದ್ದರೆ ಸಂಸದರು ಒಪ್ಪಿಕೊಳ್ಳಲಿ. ಕೆಆರ್ಎಸ್ಗೆ ಕೊಡಗು ಜಿಲ್ಲೆಯಿಂದಲೇ ನೀರು ಹೋಗಬೇಕು. ರಾಜ್ಯದ ವಿಚಾರದ ಬಗ್ಗೆ ಗೊಂದಲ ಸೃಷ್ಟಿಸಬಾರದು’ ಎಂದರು.
‘ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ನಮ್ಮ ಜಿಲ್ಲೆಯ ವಿಚಾರ, ನಿಮಗ್ಯಾಕೆ’ ಎಂದು ಹರಿಹಾಯ್ದರು.