ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ ಶೇಕಡ 100ರಷ್ಟು ಕಮಿಷನ್ ಸರ್ಕಾರವಾಗಿತ್ತು ಎನ್ನುವುದಕ್ಕೆ ಶಿಕ್ಷಕರ ನೇಮಕಾತಿ ಅಕ್ರಮ ಹಗರಣವೇ ಸಾಕ್ಷಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದೆ.
ಶಿಕ್ಷಕರ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದ ಶಿಕ್ಷಕರ ನೇಮಕಾತಿ ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಈ ಹಗರಣದ ಜಾಲ ರಾಜ್ಯವ್ಯಾಪಿ ವಿಸ್ತರಿಸಿದೆ ಎಂದು ಸಿಐಡಿ ತನಿಖೆಯಲ್ಲಿ ತಿಳಿದು ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಶೇ 100ರಷ್ಟು ಕಮಿಷನ್ ಸರ್ಕಾರವಾಗಿತ್ತು ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು’ ಎಂದು ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ಅವರ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5 ರಿಂದ 10 ಲಕ್ಷ ಡೀಲ್ ನಡೆದಿದೆ. ಕಾಂಗ್ರೆಸ್ಸಿಗರೇ, ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿ ನೀವು ಎಷ್ಟು ಕಮಿಷನ್ ಗಳಿಸಿದ್ದೀರಿ’ ಎಂದು ಬಿಜೆಪಿ ಗುಡುಗಿದೆ.
‘ಕಾಂಗ್ರೆಸ್ ಸರ್ಕಾರದ ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ನೇಮಕಾತಿ ಅಕ್ರಮ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿತರಾಗಿದ್ದಕ್ಕಿಂತ ಹೆಚ್ಚಾಗಿ ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡುವುದರಲ್ಲಿ ಮಗ್ನವಾಗಿತ್ತು’ ಎಂದು ಬಿಜೆಪಿ ಆರೋಪಿಸಿದೆ.