ಅಥಣಿ: ‘ಪರಿವಾರ-ತಳವಾರ ಹಾಗೂ ಇತ್ತರ ಜಾತಿಗಳು ಸಮುದಾಯದವರು ಗಂಗಾಮತ ಸಮಾಜದ ಪರ್ಯಾಯ ಪಂಗಡಗಳಾಗಿವೆ ಮತ್ತು ಹಿಂದಿನ ಸರ್ಕಾರದ ಲೋಪದೋಷಗಳಿಂದ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ವಿತರಿಸುವುದಕ್ಕೆ ವಿಳಂಬವಾಗಿದೆ’ ಎಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ಖಂಡಿಸಿ ಇಲ್ಲಿನ ತಳವಾರ ಸಮುದಾಯದವರು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಮುಖಂಡ ರಾಜು ಜಮಖಂಡಿಕರ ಮಾತನಾಡಿ, ‘ತಳವಾರ ಸಮುದಾಯದಲ್ಲಿ ಯಾವುದೇ ಒಳ ಪಂಗಡಗಳಿಲ್ಲ. ಇದು ಯಾವುದೇ ಪಂಗಡಕ್ಕೆ ಸೇರುವುದಿಲ್ಲ. ಇದನ್ನರಿಯದ ಸವದಿ ಅವರ ಹೇಳಿಕೆಯಿಂದಾಗಿ ಸಮಾಜದಲ್ಲಿ ಗೊಂದಲ ನಿರ್ಮಾಣವಾಗಿದೆ’ ಎಂದು ದೂರಿದರು.
‘ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಸಮರ್ಪಕ ಮಾಹಿತಿ ನೀಡಿ ತಳವಾರ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಆದಷ್ಟು ಬೇಗನೆ ಸರಿಪಡಿಸಬೇಕು. ಕೇಂದ್ರ ಸರ್ಕಾರ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದರು.
‘ಸವದಿ ತಮ್ಮ ಹೇಳಿಕೆಗೆ ಬದ್ಧರಾಗಿದ್ದರೆ ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.