ಗುರುವಾರ , ಮಾರ್ಚ್ 23, 2023
32 °C
ಕೋವಿಡ್ ವಿರುದ್ಧದ ಹೋರಾಟಕ್ಕೆ ವೆಂಕಟೇಶ್ ಸಾಥ್

ಉಚಿತವಾಗಿ ಆಕ್ಸಿಜನ್ ಸಿಲಿಂಡರ್‌ ಪೂರೈಸುವ ಉದ್ಯಮಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಉದ್ಯಮಿ ವೆಂಕಟೇಶ ಕೆ. ಪಾಟೀಲ ಅವರು ‘ಮೆಡಿಕಲ್‌ ಆಕ್ಸಿಜನ್‌ ಗ್ಯಾಸ್‌ ಸಿಲಿಂಡರ್‌’ಗಳನ್ನು ಉಚಿತವಾಗಿ ಪೂರೈಸುವ ಮೂಲಕ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ತಾಲ್ಲೂಕಿನ ಕಾಕತಿ ಕೈಗಾರಿಕಾ ಪ್ರದೇಶದಲ್ಲಿ ‘ಬೆಳಗಾಂ ಆಕ್ಸಿಜನ್ ಪ್ರೈವೇಟ್ ಲಿ.’ ಕಂಪನಿ ನಡೆಸುತ್ತಿರುವ ಅವರು, ಅಂಜುಮನ್ ಎ ಇಸ್ಲಾಂ ಸಮಿತಿ, ಆರ್‌ಎಸ್‌ಎಸ್‌ನಿಂದ ನಡೆಸಲಾಗುತ್ತಿರುವ ಜನಸೇವಾ ಕೋವಿಡ್ ಕೇರ್ ಕೇಂದ್ರ, ಆಲ್‌ ಇಕ್ರಾ ಸಂಸ್ಥೆ ಹಾಗೂ ಬೆಳಗಾವಿ ಫೇಸ್‌ಬುಕ್‌ ಫ್ರೆಂಡ್ಸ್‌ ಯೂನಿಯನ್‌ ಮೊದಲಾದ ಸರ್ಕಾರೇತರ ಸಂಘ ಸಂಸ್ಥೆಗಳಿಗೆ (ಎನ್‌ಜಿಒ) ಆಗಸ್ಟ್‌ನಿಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ನೀಡುತ್ತಿದ್ದಾರೆ.

ಅಂಜುಮನ್ ಇಸ್ಲಾಂ ಎ ಸಮಿತಿಯು ಮನೆಗಳಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೆಗಳಿಗೇ ತೆರಳಿ ಆಕ್ಸಿಜನ್ ಸಿಲಿಂಡರ್ ಒದಗಿಸುತ್ತಿದೆ. ಆರ್‌ಎಸ್‌ಎಸ್‌ ತಾನು ನಡೆಸುತ್ತಿರುವ ಕೇಂದ್ರದಲ್ಲಿ ಸೋಂಕಿತರಿಗೆ ನೆರವಾಗುತ್ತಿದೆ. ಈ ಎನ್‌ಜಿಒಗಳ ಸೇವೆಯನ್ನು ಗಮನಿಸಿ ವೆಂಕಟೇಶ್ ಅವರು ತಮ್ಮ ಕಂಪನಿಯ ಮೂಲಕ ನೆರವಾಗುತ್ತಿದ್ದಾರೆ.

1822 ಸರಬರಾಜು

‘ಆಗಸ್ಟ್‌ನಿಂದ ಈ ಕಾರ್ಯ ಆರಂಭಿಸಿದ್ದೇನೆ. ನಗರದ ನಾಲ್ಕು ಎನ್‌ಜಿಒಗಳು ಕೋವಿಡ್ ಸೋಂಕಿತರಿಗೆ ಹಾಗೂ ಅವಶ್ಯ ಇರುವವರಿಗೆ ಉಚಿತವಾಗಿ ಸೇವೆ ನೀಡುತ್ತಿವೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿ ಸಮಾಜ ಸೇವೆ ಮಾಡುತ್ತಿರುವ ಅವುಗಳಿಗೆ ನಾನು ಕೊಡುಗೆ ಕೊಡುಗೆ ಕೊಡುತ್ತಿದ್ದೇನೆ. ಇದೊಂದು ಸಣ್ಣ ಸೇವೆಯಷ್ಟೇ ಎಂದು ಭಾವಿಸುತ್ತೇನೆ. ಶುಕ್ರವಾರದವರೆಗೆ 1822 ಸಿಲಿಂಡರ್‌ಗಳಿಗೆ ಮೆಡಿಕಲ್‌ ಆಕ್ಸಿಜನ್ ಗ್ಯಾಸ್ ಭರ್ತಿ ಮಾಡಿಕೊಟ್ಟಿದ್ದೇವೆ. ಕೈಲಾದ ಸಹಾಯ ಮಾಡುತ್ತಿರುವ ಸಮಾಧಾನವಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎನ್‌ಜಿಒದವರು ಘಟಕಕ್ಕೆ ಖಾಲಿ ಸಿಲಿಂಡರ್‌ಗಳನ್ನು ತಂದು ಕೊಡುತ್ತಾರೆ. ಹಂತ ಹಂತವಾಗಿ ಅವುಗಳಿಗೆ ಆಕ್ಸಿಜನ್ ಗ್ಯಾಸ್ ತುಂಬಿಕೊಡುತ್ತೇವೆ. ನಮ್ಮ  ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದೇನೆ. ಈ ತಿಂಗಳಲ್ಲೂ ಉಚಿತ ಸೇವೆಯನ್ನು ಮುಂದುವರಿಸುತ್ತೇನೆ. ಅವುಗಳನ್ನು ಎನ್‌ಜಿಒಗಳವರು, ಕೋವಿಡ್ ಸೋಂಕಿತರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡವರಿಗೆ ಬಳಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು