ಬೆಂಗಳೂರು: ‘ಸದ್ಯಕ್ಕೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಈಗಾಗಲೇ ಬಡವರು ಕಷ್ಟದಲ್ಲಿ ಓಡಾಡುತಿದ್ದಾರೆ. ಅವರಿಗೆ ಮತ್ತೆ ಕಷ್ಟ ಕೊಡಲು ಹೋಗುವುದಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪ್ರಯಾಣ ದರ ಹೆಚ್ಚಿಸುವಂತೆ ಅಧಿಕಾರಿಗಳು ಪ್ರಸ್ತಾವನೆ ಕೊಟ್ಟಿದ್ದಾರೆ. ಮುಂದೆ ನೋಡೊಣವೆಂದು ಹೇಳಿದ್ದೇನೆ’ ಎಂದರು.
‘ಲಾಕ್ಡೌನ್ ಸಡಿಲಗೊಳಿಸಿದರೆ ಹಂತ ಹಂತವಾಗಿ ಬಸ್ ಸಂಚಾರ ಆರಂಭಿಸಲಾಗುವುದು. ಕೊರೊನಾ ನಿಯಮ ಪಾಲನೆ ಬಹಳ ಮುಖ್ಯ. ಹೀಗಾಗಿ, ಪ್ರಯಾಣಿಕರ ಅಂತರ ಕಾಯ್ದುಕೊಂಡು ಬಸ್ ಸಂಚಾರ ಆರಂಭಿಸಬೇಕು. ನೌಕರರಿಗೆ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ಸಂಸ್ಥೆಯ ವತಿಯಿಂದಲೇ ನೀಡಲಾಗುವುದು’ ಎಂದರು.
‘ಕೋವಿಡ್ ಎರಡು ಡೋಸ್ ಆಗುವವರೆಗೂ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಒತ್ತಡ ಹಾಕುವುದಿಲ್ಲ. ಎರಡನೇ ಡೋಸ್ ತೆಗೆದುಕೊಂಡವರಿಗೆ ರಕ್ಷಣೆ ಕೊಟ್ಟು ಸಾರಿಗೆ ಸೌಲಭ್ಯ ಆರಂಭಿಸಲಾಗುವುದು’ ಎಂದೂ ತಿಳಿಸಿದರು.