ವಚನ ಸಾಹಿತ್ಯವು ಅತ್ಯಮೂಲ್ಯವಾದ ವಿಶ್ವ ಸಂದೇಶವನ್ನು ನೀಡುತ್ತದೆ. ದೇಶ, ಕಾಲಾತೀತವಾಗಿ. ವರ್ಣ, ಜಾತಿ, ವರ್ಗರಹಿತವಾಗಿ ಎಲ್ಲ ಮಾನವರಿಗೆ ಅನ್ವಯವಾಗುವ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.
‘ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ! ತೊಟ್ಟಿಲು ಮುರಿದು, ನೇಣು ಹರಿದು, ಜೋಗಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು...’
ಸಾಮಾನ್ಯವಾಗಿ ಅನೇಕ ಧರ್ಮಶಾಸ್ತ್ರಗಳು ಮನುಷ್ಯನನ್ನು ವಿಚಾರ ದಾಸ್ಯಕ್ಕೆ, ಮತಾಂಧತೆಗೆ ತಳ್ಳುತ್ತದೆ. ತಮ್ಮ ಧರ್ಮಶಾಸ್ತ್ರವು ದೇವರಿಂದಲೇ ನೇರವಾಗಿ ಹೇಳಲ್ಪಟ್ಟುದು. ಆದ್ದರಿಂದ ಅದೇ ಮಾನನೀಯ ಎಂದು ಮತಾಂಧರಾಗಿ ಬಹಳ ಜನ ವರ್ತಿಸುತ್ತಾರೆ. ಇದನ್ನು ಅಲ್ಲಮಪ್ರಭುಗಳು ಬಹು ಮಾರ್ಮಿಕವಾಗಿ ವಿವರಿಸುತ್ತಾರೆ.
ಅಜ್ಞಾನ ಎಂಬ ತೊಟ್ಟಿಲಲ್ಲಿ ಜ್ಞಾನ ಎಂಬ ಶಿಶುವನ್ನು ಮಲಗಿಸಿ. ವೇದ, ಶಾಸ್ತ್ರ, ಪುರಾಣ, ಆಗಮ ಎಂಬ ಹಗ್ಗವನ್ನು ಅಜ್ಞಾನದ ತೊಟ್ಟಿಲಿಗೆ ಕಟ್ಟಿ ಭ್ರಾಂತಿ ‘ಇವೇ ಸತ್ಯ’ ಎಂಬ ಜೋಗಳ ಹಾಡುತ್ತ ಮಾನವನನ್ನು ಮೌಢ್ಯತೆಯ ನಿದ್ರೆಗೆ ಕೆಡುಹುತ್ತದೆ.
ಸತ್ಯ ಸ್ವರೂಪವಾದ ದೇವನ ಜ್ಞಾನ ಉಂಟಾಗಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು. ಶಾಸ್ತ್ರ ದಾಸ್ಯದ ಹಗ್ಗ ಹರಿಯಬೇಕು. ಭ್ರಾಂತಿಯ ಭಾವನೆಯ ಜೋಗಳ ನಿಲ್ಲಬೇಕು. ಆಗ ಮಾತ್ರ ಜ್ಞಾನ ಶಿಶು ಎಚ್ಚೆತ್ತು ಸ್ವತಂತ್ರ ವಿಚಾರ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.