ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಪ್ಪ ಮೊಯಿಲಿ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿ ಮಾ.12ಕ್ಕೆ ಲೋಕಾರ್ಪಣೆ

Last Updated 9 ಮಾರ್ಚ್ 2022, 9:43 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ‘ ಕೃತಿ ಇದೇ 12ರಂದು ಲೋಕಾರ್ಪಣೆ ಆಗಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಸಂಜೆ 4 ಗಂಟೆಗೆ ಶಾಸಕ ಜಿ. ಪರಮೇಶ್ವರ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೊಯಿಲಿ, ‘ನನ್ನ ಬೊಗಸೆಯ ಆಕಾಶ’ ಪುಸ್ತಕವನ್ನು 12ರಂದು ಜಾಗತಿಕ ಲೋಕಕ್ಕೆ ನೀಡುತ್ತೇನೆ. ಹಾಗೆಂದು, ಇದನ್ನು ರಸವತ್ತಾಗಿ ಬರೆದಿಲ್ಲ. ವಾಸ್ತವಾಂಶದಿಂದ ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಮುನ್ನುಡಿ ಬರೆದಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಆದ ಕ್ಷಣ, ತೆರಿಗೆ ಸುಧಾರಣಾ ಆಯೋಗ, ಲೋಕಸಭಾ ಚುನಾವಣೆ, ನಾನೇಕೆ ಕಾಂಗ್ರೆಸ್ ಪಕ್ಷ ಆರಿಸಿಕೊಂಡೆ, ದೇವರಾಜ ಅರಸುರವರ ಎಚ್ಚರಿಕೆ- ಸೋಲಿಲ್ಲದ ಸರದಾರ, ಭೂ ಸುಧಾರಣೆ-ಕ್ರಾಂತಿಪಥ, ಮಾತು ಬಿಟ್ಟ ಇಂದಿರಾಗಾಂಧಿ, ಕೇರಳ ರಾಜ್ಯದ ರಾಜಕೀಯ ಸ್ಥಿತ್ಯಂತರ, ರಾಜಕೀಯ ಕಂಪನ, ರಾಜಕೀಯ ಹಗ್ಗ ಜಗ್ಗಾಟ, ಆಡಳಿತದಲ್ಲಿ ಹೊಸ ಶಕೆ, ಶಿಕ್ಷಣ ಕ್ರಾಂತಿ, ಕನಸಿನ ಯೋಜನೆಗಳಿಗೆ ಮುಕ್ತಿ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ಅವರು ವಿವರಿಸಿದರು.

‘ಒಂದು ಆತ್ಮಕಥನ ಬರೆಯಬೇಕು ಅಂದಾಗ ಸತ್ಯ ಇರಬೇಕು. ಆದರೆ, ಅದನ್ನು ಬರೆಯುವುದು ಬಹಳ ಕಷ್ಟ. ರಾಜಕಾರಣದಲ್ಲಿದ್ದಾಗ ಪೂರ್ಣ ಸತ್ಯಾಂಶ ಬರೆಯಲು ಸಾಧ್ಯವಾಗುವುದಿಲ್ಲ. ನಾನು ಅನುಮಾನದಿಂದಲೇ ಬರೆಯಲು ಆರಂಭಿಸಿದ್ದೆ. ತುಂಬಾ ಜನ ಬರೆಯಲು ಹೇಳಿದರು. ಕೆಲವರು ರಸವತ್ತಾಗಿ ಬರೆಯಿರಿ ಎಂದರು. ಆದರೆ, ಅದು ಸಾಧ್ಯವಿಲ್ಲ ಎಂದೆ. ನನಗೆ ದಿನಚರಿ ಬರೆಯುವ ಅಭ್ಯಾಸವಿಲ್ಲ‌. ನಕಾರಾತ್ಮಕ ಭಾವನೆಗಳನ್ನು ತುಂಬಿಸುವ ಪ್ರಯತ್ನ ಮಾಡಿಲ್ಲ. ನನಗೆ ಸ್ವಯಂ ಸಂವಾದ ಮಾಡಿಕೊಳ್ಳುವುದೆಂರೆ ಇಷ್ಟ. ನನಗೆ ನಾನೇ ಮಾತನಾಡಿಕೊಳ್ಳುವುದೆಂದರೆ ಇಷ್ಟ. ನಮ್ಮಲ್ಲಿ ಅಧ್ಬತ ವ್ಯಕ್ತಿಯೊಬ್ಬ ಒಳಗಿರುತ್ತಾನೆ. ಅದನ್ನು ಹೊರ ತರಬೇಕಾಗುತ್ತದೆ. ನಿಮ್ಮನ್ನು ದ್ವೇಷ ಮಾಡುವವರನ್ನು ದ್ವೇಷ ಮಾಡಬೇಡಿ. ಯಾಕೆಂದರೆ ಅವರೇ ನಿಮ್ಮ ನಿಜವಾದ ವಿಮರ್ಶಕರು’ ಎಂದು ವಿಶ್ಲೇಷಿಸಿದರು.

‘ಭ್ರಷ್ಟಾಚಾರದ ಮೂಲಕ ರಾಜಕೀಯ ನಡೆಸಬಾರದು. ಈ ಪುಸ್ತಕದಲ್ಲಿ ವಸ್ತುನಿಷ್ಠತೆಯನ್ನು ನೀವು ಕಾಣಬಹುದು. ಲಕೋಟೆ ಮುಖ್ಯಮಂತ್ರಿ ಅಂತ ಯಾಕೆ ಬಂತು. ಆ ವಿಚಾರವನ್ನು ಕೂಡಾ ಈ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ನನಗೆ ನಾಚಿಕೆಯೇನೂ ಇಲ್ಲ. ಲಕೋಟೆ ಹಿಂದೆ ಒಂದು ಸತ್ಯಾಂಶ ಇದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ‌ ಈ ಪುಸ್ತಕದಲ್ಲಿದೆ’ ಎಂದರು.

‘ಪವಾಡಗಳಿಗಾಗಿ ಕಾಯಬೇಡಿ. ನಿಮ್ಮ ಜೀವನವೇ ಒಂದು ಪವಾಡ. ಸಮಯವೇ ನನ್ನ ಪ್ರತಿಸ್ಪರ್ಧಿ. ಸಮಯವೇ ನನ್ನ ವೇಗ. ವಿಧಾನಸೌಧದಲ್ಲಿ ಆಗ ಲಿಫ್ಟ್‌ನಲ್ಲಿ ಹೋಗುತ್ತಿರಲಿಲ್ಲ. ಮೆಟ್ಟಿಲಗಳ ಮೂಲಕ ಓಡಿ ಹೋಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ನಡೆಸಿದ್ದೇನೆ. ನಾಲ್ಕು ಕವನ ಸಂಕಲನಗಳನ್ನು ಬರೆದಿದ್ದೇನೆ. ಮೂರು ಕಾದಂಬರಿ, ಮೂರು ಮಹಾಕಾವ್ಯಗಳನ್ನು ಬರೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT