‘ವಿಜಯನಗರ ಸಾಮ್ರಾಜ್ಯ ಒಂದೆರಡು ದಿನದಲ್ಲಿ ಕಟ್ಟಿಲ್ಲ. ವಿದ್ಯಾರಣ್ಯರ ಸಂಕಲ್ಪ, ಹಕ್ಕ–ಬುಕ್ಕರ ಛಲದಿಂದ ಇದು ಅಸ್ತಿತ್ವಕ್ಕೆ ಬಂದಿತ್ತು. ಅದೇ ರೀತಿ ಅನೇಕ ಜನರ ಹೋರಾಟ, ಸಚಿವ ಆನಂದ್ ಸಿಂಗ್ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಇದು ಜನ್ಮ ತಳೆದಿದೆ. ಈ ಜಿಲ್ಲೆ ರಾಜ್ಯದ ಇತರೆ 30 ಜಿಲ್ಲೆಗಳಂತೆ ಸಮಾನ ಅಭಿವೃದ್ಧಿ ಕಾಣಬೇಕು. ಈಗಾಗಲೇ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಚೇರಿಗಳ ನಿರ್ಮಾಣಕ್ಕೆ ₹50 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸ್ಥಾಪನೆಯ ದಿನವೇ
ಅಭಿವೃದ್ಧಿ ಪರ್ವ ಆರಂಭಗೊಂಡಿದೆ’ ಎಂದರು.