ಚನ್ನಪಟ್ಟಣ: ಸ್ಥಳೀಯ ಚುನಾವಣೆಗಳಲ್ಲಿ ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡರೆ ತಪ್ಪೇನಿದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸಮರ್ಥಿಸಿಕೊಂಡರು.
ಕೊಳ್ಳೆಗಾಲದ ಹನೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ. ನವಲಗುಂದದಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ. ಹಾಗಾಗಿ ಸ್ಥಳೀಯವಾಗಿ ಮೂರು ಪಕ್ಷದವರು ಹೊಂದಾಣಿಕೆಯಾಗುತ್ತಿದ್ದಾರೆ. ಅದು ಸ್ಥಳೀಯ ವಿಚಾರ ಎಂದು ಸಮಜಾಯಿಷಿ ನೀಡಿದರು.
ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿಯಾಗಿದೆ ಎಂದಾಕ್ಷಣ ಜೆಡಿಎಸ್ ಗೆ ಬಿಜೆಪಿ ಬಗ್ಗೆ ಮೃದುಧೋರಣೆ ಇದೆ ಎಂದು ತಿಳಿಯಬೇಡಿ ಎಂದೂ ಅವರು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಪ್ರಾಧಿಕಾರ ರಚಿಸುವುದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ
ಚನ್ನಪಟ್ಟಣ: ಅಭಿವೃದ್ಧಿ ಪ್ರಾಧಿಕಾರ ರಚಿಸುವುದರಿಂದ ಸಮುದಾಯದ ಅಭಿವೃದ್ಧಿ ಆಗುತ್ತದೆ ಎನ್ನುವ ನಂಬಿಕೆ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ರಚನೆ ಕುರಿತು ಗುರುವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಜಾತಿಗಳಿಗೂ ಪ್ರಾಧಿಕಾರ ಸ್ಥಾಪಿಸುವುದಾದರೆ ಸ್ಥಾಪನೆ ಮಾಡಲಿ. ರಾಜ್ಯದಲ್ಲಿ ಸಣ್ಣಪುಟ್ಟ ಜಾತಿಗಳೆಲ್ಲ ಸೇರಿ ಸುಮಾರು 560 ಜಾತಿಗಳಿವೆ. ಎಲ್ಲ ಜಾತಿಗಳಿಗೂ ಪ್ರಾಧಿಕಾರ ಮಾಡಿದರೆ ಒಳ್ಳೆಯದಲ್ಲವೆ ಎಂದು ಕೇಳಿದರು.
‘ಈಗಾಗಲೇ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ರಚನೆಯಾಗಿದೆ, ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಕೆಲವರು ಧ್ವನಿ ಎತ್ತಿದ್ದಾರೆ. ಆದರೆ, ನಾನು ಈ ವಿಚಾರಗಳಿಗೆ ತಲೆಹಾಕುವುದಿಲ್ಲ. ಎಲ್ಲ ಸಮುದಾಯದಲ್ಲೂ ಬಡವರಿದ್ದಾರೆ. ಆ ಬಡಜನರ ಅಭಿವೃದ್ಧಿ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ’ ಎಂದು ಸಲಹೆ ನೀಡಿದರು.