ಕಾವೇರಿಯ ತೀರ ಕೊಡಗಿನಲ್ಲೀಗ ತುಲಾ ಸಂಕ್ರಾಂತಿ ಸಂಭ್ರಮ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರೆಯ ವೈಭವ. ಸೂರ್ಯನು ತುಲಾ ಮಾಸ ಪ್ರವೇಶಿಸುವ ಈ ದಿನ ಕೊಡಗಿನಲ್ಲಿ ಕುಲದೇವಿ ಕಾವೇರಿ ಮಾತೆಯನ್ನು ಪೂಜಿಸಿ, ಪುಣ್ಯಸ್ನಾನದಿಂದ ಪುನೀತರಾಗುವರು. =ಕಲ್ಮಶ ದೂರ ಮಾಡುವುದು, ವೇ= ಮನಸ್ಸಿನ ಇಚ್ಛೆ ನೆರವೇರುವುದು ಹಾಗೂ ರಿ=ಮೋಕ್ಷ... ಇದೇ ಕಾವೇರಿ.
ಪೂಜೆ ಹೀಗೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಯಿಂದ ೪೨ಕಿ.ಮೀ ದೂರದಲ್ಲಿರುವ ಭಾಗಮಂಡಲದಲ್ಲಿ ಭಗಂಡೇಶ್ವರ ದೇವಸ್ಥಾನವಿದೆ. ಅಲ್ಲಿಂದ ೭. ಕಿ.ಮೀ ದೂರದಲ್ಲಿ ಬೆಟ್ಟದ ಮೇಲೆ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ ನೆಲೆ. ದಲು ಭಕ್ತರು ಭಾಗಮಂಡಲದ ಕಾವೇರಿಕನ್ನಿಕೆ-ಸುಜ್ಯೋತಿ ನದಿಗಳು ಸಂದಿಸುವ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ, ಭಗಂಡೇಶ್ವರ ಪೂಜೆ ಮಾಡುತ್ತಾರೆ.
ಕೊಡಗಿನ ಮೂಲ ನಿವಾಸಿಗಳು ಇಲ್ಲಿ ತಮ್ಮ ಹಿರಿಯರಿಗೆ ಮುಡಿ ಅರ್ಪಿಸಿ ಪಿಂಡವನ್ನಿಡುತ್ತಾರೆ. ನಂತರ ತಲಕಾವೇರಿಯಲ್ಲಿ ಪೂಜೆ ಮಾಡಿಸಿ, ತೀರ್ಥ ಕುಂಡಿಕೆಯಿಂದ ತೀರ್ಥ ಪಡೆದು, ಬಳಿಯ ಕೊಳದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗುತಾರೆ. ಹ್ಮಗಿರಿ ಬೆಟ್ಟ ಹತ್ತಿ ಬರುತ್ತಾರೆ. ತೀರ್ಥೋದ್ಭವದ ದಿನದಂದು ತೀರ್ಥ ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ.
ಕಾವೇರಿ ತೀರ್ಥವು ಎಂದೂ ಕೆಡದ ಪುಣ್ಯ ತೀರ್ಥವಾಗಿ ಕೊಡಗಿನವರ ಮನೆಯಲ್ಲಿರುತ್ತದೆ. ಕೊಡವರು ತಮ್ಮಲ್ಲಿ ಹುಟ್ಟಿದ ಮಗುವಿಗೆ ತೀರ್ಥ ಕೊಟ್ಟು ಸ್ವಾಗತಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ತೀರ್ಥವನ್ನು ಬಳಸುತ್ತಾರೆ. ಕೊನೆ ಉಸಿರೆಳೆಯುವ ಪ್ರತಿಯೊಬ್ಬರ ಬಾಯಿಗೂ ತೀರ್ಥ ನೀಡಿ ಸ್ವರ್ಗಯಾತ್ರೆ ಮಾಡಲೆಂದು ಹಾರೈಸುತ್ತಾರೆ.
ಕೊಡವರು ಹಾಗೂ ಮೂಲನಿವಾಸಿಗಳು ಸೇರಿ ಸಂಕ್ರಮಣ ಹಬ್ಬವನ್ನು ಭಕ್ತಿ ಭಾವದಿಂದ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಕುಟುಂಬದ ಹಿರಿಯರ ಮನೆಯಲ್ಲಿ ಇಲ್ಲವೇ ಮನೆ ಮನೆಯಲ್ಲೂ ಸಂಕ್ರಾಂತಿಯಂದು ಮಾತೆಯ ಕಣಿ ಪೂಜೆ ನಡೆಯುತ್ತದೆ.ಗದ್ದೆಗೆ, ತೋಟಕ್ಕೆ, ಮನೆಯ ಬಾಗಿಲಿನ ಎದುರು ಅಂಗಳದಲ್ಲಿ, ಕೊಟ್ಟಿಗೆ, ಬಾವಿ, ಕಾರ್ಮಿಕರ ವಸತಿಗೃಹ... ಹೀಗೆ ಎಲ್ಲೆಡೆ ಬೆಚ್ಚು ಮರದ ಕೋಲನ್ನು ಚುಚ್ಚುತ್ತಾರೆ.
ಅದರ ಮೇಲೆ ಬೆಚ್ಚು ಬಳ್ಳಿಯನ್ನು ಚಕ್ರಾಕಾರದಲ್ಲಿ ಜೋಡಿಸಿ ಇಡುತ್ತಾರೆ. ಕೆಲವು ಭಾಗಗಳಲ್ಲಿ ಬೆಚ್ಚಿನ ಬದಲು ಕಾಂಡದ ಕೋಲನ್ನೋ ಇಲ್ಲವೇ ಬಿದಿರಿನ ಕೋಲನ್ನೋ ಗದ್ದೆಯಲ್ಲಿ ನೆಡುತ್ತಾರೆ. ಬೆಚ್ಚಿನ ಮೇಲೆ ಬೆಚ್ಚು ಹೂವು ಎನ್ನಲಾಗುವ ಕೆಂಪು ಹೂವು ಮತ್ತು ಚೆಂಡು ಹೂವನ್ನು ಇಟ್ಟು ಅಲಂಕಾರ ಮಾಡುತ್ತಾರೆ. ಕುಟುಂಬದ ಹಿರಿಯರ ಗದ್ದೆಯ ಒಂದು ಕೊನೆಯಲ್ಲಿ ಶಾಸ್ತ್ರಕ್ಕೆ ಮೂರು ಬೆಚ್ಚನ್ನು ತ್ರಿಕೋನಾಕಾರದಲ್ಲಿ ನೆಟ್ಟು ಅದನ್ನು ಬೆಚ್ಚು ಬಳ್ಳಿ ಹೂವಿನಿಂದ ಅಲಂಕಾರ ಮಾಡುತ್ತಾರೆ. ಇದರ ಮೇಲೆ ತೀರ್ಥ ಬಂದ, ಮಾರನೆ ದಿವಸ ದೋಸೆ ಹಿಟ್ಟು ಇಡುವ ಸಂಪ್ರದಾಯವಿದೆ.
ಕಣಿ ಪೂಜಾ ವಿಧಾನ
ಕಾವೇರಿ ಮಾತೆಯ ಕಣಿ ಪೂಜೆ ಈ ದಿನದ ವಿಶೇಷ. 18ರಂದು ಈ ಪೂಜೆ ನಡೆಯಲಿದೆ. ಅಂದು ಹಿರಿಯರೊಬ್ಬರು ಸೂರ್ಯ ಉದಯಿಸುವ ಮುನ್ನ ವಿಶೇಷವಾಗಿ ಹಬ್ಬಕೆಂದು ತಯಾರಿಸಿದ ದೋಸೆ ಮತ್ತು ಕುಂಬಳಕಾಯಿ ಸಾರನ್ನು, ಕುಡಿಬಾಳೆ ಎಲೆಯಲ್ಲಿಟ್ಟು ಅದಕ್ಕೆ ತುಪ್ಪ ಹಾಕಿ, ನಂತರ ಬಾಳೆಎಲೆಯ ತುದಿಗೆ ಎಣ್ಣೆ ಬತ್ತಿಯ ದೀಪ ಹಚ್ಚಿ, ತಮ್ಮ ಗದ್ದೆಯಲ್ಲಿ ವಿಶೇಷವಾಗಿ ನೆಟ್ಟ ಮೂರು ಬೆಚ್ಚಿನ ಮೇಲೆ ಪೂರ್ವಾಭಿಮುಖವಾಗಿ ಅದನ್ನು ಇಟ್ಟು ದೇವರಿಗೆ ನಮಸ್ಕರಿಸಿ ಬರುತ್ತಾರೆ.
ನಂತರ ಮನೆಯಲ್ಲಿ ಕಣಿ ಪೂಜೆ. ತರಕಾರಿಯನ್ನು ಕಾವೇರಿ ಮಾತೆಯಂತೆ ಆಕಾರಕ್ಕೆ ಕತ್ತರಿಸಿ ಇಟ್ಟು ಹಲವರು ವಿಶೇಷ ಪೂಜೆ ನಡೆಸುತ್ತಾರೆ. ಕಣಿ ಪೂಜೆ ನಂತರ ಮನೆಯ ಬಾವಿಯ ನೀರಿಗೆ ವೀಳ್ಯೆದೆಲೆ ಅರ್ಪಿಸಿ, ತೆಂಗಿನಕಾಯಿ ಒಡೆದು ಗಂಗಾ ಪೂಜೆ ಮಾಡಿ ಕಾವೇರಿ ಪುಣ್ಯ ತುಂಬಿದ ನೀರನ್ನು ಎಳೆದು ತರುತ್ತಾರೆ. ಇದು ಹಬ್ಬದ ಮೂಲ ಆಚರಣೆ. ತೀರ್ಥೋದ್ಭವದ ಕ್ಷಣದಲ್ಲಿ ಕೊಡಗಿನ ಎಲ್ಲಾ ಬಾವಿಗಳಲ್ಲಿ ನೀರು ಗುಳ್ಳೆಯೊಂದಿಗೆ ಉಕ್ಕುತ್ತದೆ ಎನ್ನುತ್ತಾರೆ ಹಿರಿಯರು.
ಕೊಡಗಿನಾಚೆ ನೆಲೆಸಿರುವ ಕೊಡವರು ಸಹ ತುಲಾ ಸಂಕ್ರಾಂತಿಯನ್ನು ಅದೇ ದಿನ ಭಕ್ತಿ ಭಾವಗಳಿಂದ ಆಚರಿಸುತ್ತಾರೆ. ಮನೆಯಲ್ಲಿ ತೀರ್ಥ ಬಂದ ನಂತರ ಕಣಿ ಪೂಜೆ ಮಾಡುತ್ತಾರೆ. ಕೊಡವ ಸಮಾಜ, ಕೊಡವ ಸಂಘಟನೆಗಳು ಹಾಗೂ ಕುಟುಂಬಗಳಲ್ಲಿ ತಲಕಾವೇರಿಯಿಂದ ತೀರ್ಥ ತರಿಸಿಕೊಂಡು ಜನಾಂಗದವರಿಗೆ ವಿತರಿಸುವ ವ್ಯವಸ್ಥೆಯನ್ನೂ ಮಾಡುತ್ತಿದೆ. ತಮಿಳುನಾಡು ಹಾಗೂ ರಾಜ್ಯದ ಮೈಸೂರು-, ಮಂಡ್ಯ ಜಿಲ್ಲೆಗಳಲ್ಲೂ ಕಾವೇರಿ ಜಾತ್ರೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ತಲಕಾವೇರಿ ತೀರ್ಥೋದ್ಭವ ಜಾತ್ರೆಗೆ ಕೊಡಗು ಅಲ್ಲದೆ ಹೆಚ್ಚಿಗೆ ಮೈಸೂರು, ಮಂಡ್ಯದ ಕಾವೇರಿಕೊಳ್ಳದ ನಾಡಿನ ಜನತೆ ಭಕ್ತಿಯಿಂದ ಬರುವಂತೆ, ಕೇರಳ, ತಮಿಳುನಾಡಿನಿಂದಲೂ ಬಂದು ಪೂಜೆ ಮಾಡುತ್ತಾರೆ. ಲಕಾವೇರಿಗೆ ತೆರಳಲಾಗದ ಕೊಡಗಿನ ಭಕ್ತರು, ಕಾವೇರಿ ನದಿ ತೀರದಲ್ಲಿರುವ ನಾಪೋಕ್ಲು ಸಮೀಪದ ಪಾಲೂರು ಹರಿಶ್ಚಂದ್ರ, ಮೂರ್ನಾಡು ಸಮೀಪದ ಬಲಮುರಿಯ ಭಗಂಡೇಶ್ವರ, ಸಿದ್ದಾಪುರ ಸಮೀಪದ ಗುಹ್ಯದ ಅಗಸ್ತೇಶ್ವರ ಮುಂತಾದ ದೇವಸ್ಥಾನಗಳಿಗೂ ಜಾತ್ರೆ ಸಮಯದಲ್ಲಿ ತೆರಳಿ ಪೂಜೆ ಮಾಡಿಸುತ್ತಾರೆ.
-ಪಳಂಗಂಡ ಕೆ. ಚಂಗಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.