ಕೊಂಕಣ ತೀರದ ಸ್ವಚ್ಛ ಸುಂದರ ಸಮುದ್ರ ತೀರಗಳಲ್ಲಿ ಶ್ರೀವರ್ಧನ ಕೂಡ ಒಂದು. ಸಂಜೆಯಾಯಿತೆಂದರೆ ಇಲ್ಲಿ ಮೆಲ್ಲನೆ ಬೀಸುವ ತಂಗಾಳಿಗೆ ಮುಖವೊಡ್ಡಿ ಸೂರ್ಯ ಮುಳುಗುವುದನ್ನು ನೋಡಬಹುದು. ಬೆಳಗಿನ ವೇಳೆಯ ಏರು ಬಿಸಿಲಿನಲ್ಲಿ ಸೂರ್ಯಸ್ನಾನ ಮಾಡಬಹುದು. ಮೃದುವಾದ ಮಣ್ಣಿನಲ್ಲಿ ಗೂಡು ಕಟ್ಟಿ ಅಲೆಗಳ ವಯ್ಯಾರಕ್ಕೆ ಅದು ಕುಸಿಯುವುದನ್ನು ಕಂಡು ಮೆಚ್ಚಬಹುದು. ಅಲ್ಲದೇ ಒಂದು ಪುಟ್ಟ ದೋಣಿಯಲ್ಲಿ ಸಾಗಿ ಅಲೆಗಳ ಹೊಯ್ದಾಟದ ಅನುಭವ ನಮ್ಮದಾಗಿಸಿಕೊಳ್ಳಬಹುದು.
ಶರಧಿ ತಟ ಇಷ್ಟಪಡುವ ಪ್ರವಾಸಿಗರಿಗೆ ಇನ್ನೇನು ಬೇಕು?
ಮಹಾರಾಷ್ಟ್ರ ರಾಜ್ಯದ ರಾಯಗಢ ಜಿಲ್ಲೆಯ ಶ್ರೀವರ್ಧನ ಪಟ್ಟಣದಲ್ಲಿ ಇರುವ ಈ ಸಮುದ್ರ ತೀರಕ್ಕೆ ಸಮೀಪದಲ್ಲಿಯೇ ಕೊಂಡೀವಳಿ ಮತ್ತು ದಿವಿಗರ್ ಸಮುದ್ರ ತೀರಗಳಿವೆ. ಇಲ್ಲಿಗೆ ಪಾಂಡವರು ಭೇಟಿ ನೀಡಿದ್ದರು ಎಂಬ ಪ್ರತೀತಿ ಇದೆ.
18 ಕಿ.ಮೀ ದೂರದಲ್ಲಿ ಹರಿಹರೇಶ್ವರದಲ್ಲಿ ಶಿವನ ದೇವಾಲಯವೂ ಇದೆ. ಅಲ್ಲಿಂದ ಕೇವಲ 4 ಕಿ.ಮೀ ಅಂತರದಲ್ಲಿ ಭಾಗಮಂಡಲ ಇದೆ. ಅಲ್ಲಿ ಬನಕೋಟ್ ಹೆಸರಿನ ಕೋಟೆ ಮತ್ತು ಕಾಲಭೈರವ ದೇವಾಲಯ ಇದೆ. ಇದನ್ನು ಪೇಶ್ವೆಗಳ ನಾಡು ಎನ್ನಲಾಗುತ್ತದೆ. ಅಲ್ಲಿರುವ ಪೇಶ್ವೆಗಳ ಸ್ಮಾರಕವನ್ನು ನೋಡಲು ಜನ ಬರುತ್ತಾರೆ.
ಮುಂಬೈನಿಂದ 185 ಕಿ.ಮೀ, ಪೂನಾದಿಂದ 163 ಕಿ.ಮೀ ದೂರ ಇರುವ ಈ ತೀರಕ್ಕೆ ಮನಗಾಂವ್ ಹತ್ತಿರದ ರೈಲು ನಿಲ್ದಾಣ.