ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿಗೆ ಒಳಪಡುವ ಬಂಡೀಪುರ ದೇಶದ ಪ್ರಮುಖ ಅಭಯಾರಣ್ಯಗಳಲ್ಲೊಂದು. 990 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಹುಲಿ ಮತ್ತು ಆನೆಗಳಿಗೆ ಆಶ್ರಯ ನೀಡಿದೆ.
ನೂರಾರು ಪಕ್ಷಿ ಹಾಗೂ ಸಸ್ಯ ಪ್ರಬೇಧಗಳು ಇಲ್ಲಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಹುಲಿಗಳಿರುವ ಕಾಡು ಬಂಡೀಪುರ ಎಂದು ಬಣ್ಣಿಸಿದೆ.
ಬಂಡೀಪುರದ ಒಂದು ದಿಕ್ಕಿಗೆ ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವೈನಾಡ್ ವನ್ಯಜೀವಿ ಅಭಯಾರಣ್ಯ ಇದೆ. ಮತ್ತೊಂದು ದಿಕ್ಕಿನಲ್ಲಿ ಕಬಿನಿ ಹಿನ್ನೀರು, ನಾಗರಹೊಳೆ ಅರಣ್ಯ. ನೀಲಗಿರಿ ತಪ್ಪಲಿನಲ್ಲಿರುವ ಬಂಡೀಪುರ ಅರಣ್ಯ ಮಲೆ ಮಹದೇಶ್ವರ, ಬಿಳಿಗಿರಿ ರಂಗನಬೆಟ್ಟದವರೆಗೂ ವಿಸ್ತರಿಸಿದೆ.
ಬೆಂಗಳೂರಿನಿಂದ ಬಂಡೀಪುರಕ್ಕೆ 230 ಕಿ.ಮೀ. ದೂರ. ಮೈಸೂರಿನಿಂದ 90 ಕಿಮೀ ದೂರದ ಬಂಡೀಪುರ ಗುಂಡ್ಲುಪೇಟೆಯಿಂದ 17 ಕಿ.ಮೀ. ಅಂತರದಲ್ಲಿದೆ.ಮುಂಗಾರಿನ ಆಗಮನದಿಂದ ಈಗ ಬಂಡೀಪುರ ಕಾನನದಲ್ಲಿ ಎಲ್ಲಿ ನೋಡಿದರೂ ಕಣ್ಮನ ತಣಿಸುವ ಹಸಿರು. ಈಚೆಗೆ ಕಾಡಿಗೆ ಹೋಗಿದ್ದಾಗ ಹಚ್ಚ ಹಸುರಿನ ನಡುವೆ ಗಾಂಭೀರ್ಯದಿಂದ ಧೀರ ನಡಿಗೆಯನ್ನಿಡುತ್ತಾ ತೀಕ್ಷ್ಣ ಕಣ್ಣುಗಳಿಂದ ಎದುರಿನವರ ಎದೆ ಬಗೆಯುವಂತೆ ಬರುವ ಹುಲಿರಾಯ ಕಾಣಿಸಿದ.
ಆ ಹುಲಿರಾಯನ ಚಿತ್ರಗಳು ಇಲ್ಲಿವೆ. ಸದ್ಯಕ್ಕೆ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕಾಡಿನಲ್ಲಿ ಸಫಾರಿಗೆ ನಿಲುಗಡೆ. ಹಾಗಾಗಿ, ಚಿತ್ರದಲ್ಲಷ್ಟೇ ಹುಲಿರಾಯನನ್ನು ನೋಡಬಹುದು.