ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಅವುಗಳಿಂದ ಆಗುವ ಹಾನಿಗಳ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಿ ಎಂಬುವುದು ನಗರದ ವೈದ್ಯರ ಸಲಹೆ.
ಪಟಾಕಿ ಸಿಡಿಸುವಾಗ ಮಕ್ಕಳನ್ನು ಸುರಕ್ಷಿತ ಅಂತರದಲ್ಲಿ ಇರುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಮಕ್ಕಳನ್ನು ಒಬ್ಬಂಟಿಯಾಗಿ ಪಟಾಕಿ ಸಿಡಿಸಲು ಬಿಡಬಾರದು ಎನ್ನುವುದು ಬನ್ನೇರುಘಟ್ಟದ ಅಗರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ. ಬಿಂದಿಯಾ ಹಪಾನಿ ಎಚ್ಚರಿಕೆ.
ಪಟಾಕಿ ಸಿಡಿಸುವಾಗ ಕೈ ಮತ್ತು ಬೆರಳುಗಳಿಗೆ ಗಾಯವಾಗುವ ಪ್ರಕರಣ ಆಸ್ಪತ್ರೆಗೆ ಬರುತ್ತವೆ. ಇದರ ನಂತರ ಅತಿ ಹೆಚ್ಚು ಗಾಯ ಸಂಭವಿಸುವುದು ಕಣ್ಣುಗಳಿಗೆ. ಬೀದಿ, ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾರೆ. ಪಟಾಕಿ ಸಿಡಿಸುವವರಿಗಿಂತ ಹೆಚ್ಚಾಗಿ ಪಾದಚಾರಿಗಳು ಗಾಯ ಮಾಡಿಕೊಂಡಿದ್ದಾರೆ. ಎಂಬುದು ಬಿಂದಿಯಾ ಅನುಭವ.
ಕಣ್ಣುಗಳಲ್ಲಿ ಕಿರಿಕಿರಿ, ತುರಿಕೆ ಮತ್ತು ಕಣ್ಣಿನ ಓಪನ್ ಗ್ಲೋಬ್ ಗಾಯ (ಕಣ್ಣಿನ ಗೋಡೆಗೆ ಪೂರ್ಣಪ್ರಮಾಣದ ದಪ್ಪ ಗಾಯ) ಅಂಧತ್ವಕ್ಕೆ ಕಾರಣವಾಗಬಲ್ಲದು. ಪಟಾಕಿಯಲ್ಲಿನ ಗನ್ಪೌಡರ್ ರಾಸಾಯನಿಕ, ಕಣ್ಣು, ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ರಾಸಾಯನಿಕಯುಕ್ತ ಹೊಗೆಯಿಂದ ಕಣ್ಣುಗಳಲ್ಲಿ ಉರಿ ಉಂಟಾಗುತ್ತದೆ ಮತ್ತು ನೀರು ಬರಲಾರಂಭಿಸುತ್ತದೆ. ಹಾಗೇ ಉಸಿರಾಟದ ತೊಂದರೆ ತರುತ್ತದೆ. ದೀಪಾವಳಿ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವಾಗ ಮೈತುಂಬಾ ಹತ್ತಿ ಬಟ್ಟೆ ತೊಡುವುದು ಉತ್ತಮ. ಸುಟ್ಟ ಗಾಯ ಹಾಗೂ ಅಲರ್ಜಿ ಈ ಹಬ್ಬದಲ್ಲಿ ಹೆಚ್ಚು ಎನ್ನುತ್ತಾರೆ ವೈದ್ಯರು.
ಪಟಾಕಿಯ ಸದ್ದಿನಿಂದ ಕಿವಿ ತಮಟೆಗೆ ಹಾನಿಯಾಗುವ ಪ್ರಕರಣ ಹೆಚ್ಚು ಎನ್ನುತ್ತಾರೆ ಕಿವಿ, ಮೂಗು ಮತ್ತು ಗಂಟಲು(ಇಎನ್ಟಿ) ತಜ್ಞರು. ಎರಡು ಅಥವಾ ಹೆಚ್ಚು ಪಟಾಕಿಗಳನ್ನು ಒಂದೇ ಬಾರಿ ಸಿಡಿಸಬಾರದು. ದೊಡ್ಡ ಶಬ್ದದ ಪಟಾಕಿ ಸಿಡಿಸುವಾಗ ದೂರ ನಿಂತಿರಬೇಕು. ಹತ್ತಿ ಉಂಡೆ ಕಿವಿಯೊಳಗೆ ಇಟ್ಟುಕೊಳ್ಳುವುದು ಉತ್ತಮ.
***
ಎಚ್ಚರಿಕೆ ಇರಲಿ
ಪಟಾಕಿ ಹಾರಿಸಿದ ನಂತರ ಶುದ್ಧವಾದ ನೀರಿನಿಂದ ಕೈಗಳನ್ನು ತೊಳೆಯಿರಿ.
ಅಗ್ನಿ ಅವಘಡ ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಬಕೆಟ್ನಲ್ಲಿ ನೀರು ಮತ್ತು ಮರಳು ಸಿದ್ಧವಾಗಿಟ್ಟುಕೊಳ್ಳಬೇಕು.
ಸುರಕ್ಷಿತ ಸ್ಥಳದಲ್ಲಿ ಮುಚ್ಚಿದ ಬಾಕ್ಸ್ನಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಬೇಕು ಮತ್ತು ಮಕ್ಕಳಿಂದ ಅವುಗಳನ್ನು ದೂರವಿಡಬೇಕು.
ಪಟಾಕಿ ಹಚ್ಚುವಾಗ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.
ಪಟಾಕಿ ಹಚ್ಚುವಾಗ ಕನಿಷ್ಠ ಪಕ್ಷ ಒಂದು ಮೊಳದಷ್ಟು ದೂರ ನಿಂತಿರಬೇಕು. ಕಿವಿಗೆ ಮಫ್ಲರ್ ಅಥವಾ ಹತ್ತಿ ಉಂಡೆ ಇಡಬೇಕು
ಪಟಾಕಿ ಹಾರಿಸಲು ಹೋಗುವ ಮುನ್ನ ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ. ಕನ್ನಡಕ ಧರಿಸಿ.
ಹೊರಗೆ ಹೋಗುವಾಗ ಮಾಯಿಶ್ಚರೈಶನ್ ಕ್ರೀಮ್ ಬಳಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.