ವಿವಿಧ ಬಗೆಯ ಸ್ವಾದಭರಿತ ಕಾಫಿಯನ್ನು ತಯಾರಿಸಿ, ಅದನ್ನು ಆಕರ್ಷಕವಾಗಿ ಗ್ರಾಹಕರಿಗೆ ನೀಡುವುದು ಒಂದು ಕಲೆ! ಅದನ್ನು ಗುರುತಿಸಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಬರಿಸ್ತಾ ಚಾಂಪಿಯನ್ಶಿಪ್ ಸ್ಪರ್ಧೆ ನಡೆಯುತ್ತದೆ.
ಇದಕ್ಕೂ ಪೂರ್ವಭಾವಿಯಾಗಿ ವಿವಿಧ ಕಾಫಿ ಕೇಂದ್ರಗಳು ತಮ್ಮಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳಿಸುತ್ತವೆ. ಇಲ್ಲಿ ಗೆದ್ದವರು ವಿದೇಶದಲ್ಲಿ ನಡೆಯುವ ಬರಿಸ್ತಾ ಚಾಂಪಿಯನ್ಶಿಪ್ ಕಾಫಿ ತಯಾರಿಕಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.
ಇಂಡಿಯಾ ಬರಿಸ್ತಾಕ್ಕೆ ತನ್ನ ಪ್ರತಿನಿಧಿಯನ್ನು ಆರಿಸಲು ಕೆಫೆ ಕಾಫಿ ಡೇ ಈಚೆಗೆ ನಗರದಲ್ಲಿ ‘ಕಾಫಿ ಸ್ವಾದ ತಜ್ಞ’ ಸ್ಪರ್ಧೆ ನಡೆಸಿತು. ದೇಶದ ವಿವಿಧೆಡೆಯ ಕೆಫೆ ಕಾಫಿ ಡೇ ಪರಿಣತರು ಚಾಕೋಲೆಟ್ ಹಾಗೂ ಆರೆಂಜ್ ಫ್ಲೆವರ್, ಮೆಕ್ಸಿಕನ್, ಅರೇಬಿಕಾ, ಕಪುಚಿನೊ, ಮಸಾಲಾ ಹೀಗೆ ವೈವಿಧ್ಯಮಯ ಕಾಫಿಯನ್ನು ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದರು.
ಪುಣೆ ಕೇಂದ್ರದ ಎಸ್. ಸಂತೋಷ್, ಬೆಂಗಳೂರಿನ ನವೀನ್ ಕುಮಾರ್ ಮತ್ತು ಮನೋಜ್ ಶೆಟ್ಟಿ ಅಂತಿಮ ಸ್ಪರ್ಧೆಯಲ್ಲಿ ಗೆದ್ದು, ‘ಕಾಫಿ ಸ್ವಾದ ತಜ್ಞ’ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಹರೀಶ್ ಬಿಜೂರ್, ಅಭಿಜಿತ್ ಷಾ ಮತ್ತು ಕಾಫಿ ಸ್ವಾದ ತಜ್ಞೆ ಎಂದೇ ಹೆಸರಾದ ಸುನಾಲಿನಿ ಮೆನನ್ ತೀರ್ಪಗಾರರಾಗಿದ್ದರು.
‘ಕಾಫಿ ತಯಾರಿಕೆಯಲ್ಲಿ ಸೃಜನಶೀಲತೆ ಪ್ರೋತ್ಸಾಹಿಸುವುದು, ಅಂತರ್ರಾಷ್ಟ್ರೀಯ ಸ್ಪರ್ಧೆಗೆ ಸಜ್ಜುಗೊಳಿಸುವುದೇ ಇದರ ಉದ್ದೇಶ’ ಎಂದರು ವ್ಯವಸ್ಥಾಪಕ ವೇಣು ಮಾಧವ.