‘ಇದು ವಿಜೇಂದರ್ ವಿಜಯ’
ಹಾಗಂತ ಭಾರತದ ಬಾಕ್ಸಿಂಗ್ ಜಗತ್ತು ತುಂಬಾ ಖುಷಿಯಿಂದ ಮಾತನಾಡಿ ಕೊಳ್ಳುತ್ತಿದೆ.
ಯಾವುದಾದರೂ ಹೊಸ ಸಾಹಸಕ್ಕೆ ಕೈ ಹಾಕಿದಾಗ ಆರಂಭದಲ್ಲಿ ವಿರೋಧ, ಅವನಿಂದ ಏನು ಸಾಧ್ಯ ಎನ್ನುವ ಕುಹಕ ಮಾತುಗಳ ಸಾಮಾನ್ಯ. ಇದೆಲ್ಲವನ್ನೂ ಮೀರಿ ಗುರಿಯತ್ತ ಮುನ್ನಡೆದಾಗ ಟೀಕಿಸಿದ ಜನರೇ ಶ್ಲಾಘಿಸುತ್ತಾರೆ. ಇದು ಒಲಿಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್ ವಿಷಯದಲ್ಲಿಯೂ ನಿಜವಾಗಿದೆ.
ಹರಿಯಾಣದ ಭಿವಾನಿ ಜಿಲ್ಲೆಯ ಕುಲುವಾಸ್ ಗ್ರಾಮದ ವಿಜೇಂದರ್ ಎರಡು ವರ್ಷಗಳ ಹಿಂದೆ ‘ಅಮೆಚೂರ್ ಬಾಕ್ಸಿಂಗ್ನಲ್ಲಿ ಗುದ್ದಾಟ ಸಾಕಿನ್ನು, ವೃತ್ತಿಪರ ಬಾಕ್ಸಿಂಗ್ನಲ್ಲಿ ಸಾಧನೆ ಮಾಡುತ್ತೇನೆ’ ಎಂದು ದಿಟ್ಟ ನಿರ್ಧಾರ ಪ್ರಕಟಿಸಿದಾಗ ಅಚ್ಚರಿಪಟ್ಟವರೇ ಹೆಚ್ಚು.
ವಿಜೇಂದರ್ ಅಮೆಚೂರ್ ಬಾಕ್ಸಿಂಗ್ನಲ್ಲಿ ವಿಫಲರೇನೂ ಆಗಿರಲಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್ನ ಮಿಡ್ಲ್ವೇಟ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಒಲಿಂಪಿಕ್ಸ್ನ ಬಾಕ್ಸಿಂಗ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಎನ್ನುವ ಹೆಗ್ಗಳಿಕೆ ವಿಜೇಂದರ್ ಹೆಸರಿನಲ್ಲಿದೆ. ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು, ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್ಷಿಪ್ ಹೀಗೆ ಪ್ರತಿ ಟೂರ್ನಿ ಯಲ್ಲಿಯೂ ಸಾಲು ಸಾಲಾಗಿ ಪದಕಗಳನ್ನು ಜಯಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಇಷ್ಟೇ ಸಾಧನೆಗೆ ಸಮಾಧಾನ ಪಟ್ಟುಕೊಳ್ಳಬಹುದಿತ್ತು.
ಆದರೆ ಸಾಹಸಿ ವಿಜೇಂದರ್ ವೃತ್ತಿಪರ ಬಾಕ್ಸಿಂಗ್ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿ ಲಂಡನ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರು. ಆಗ ರಿಯೊ ಒಲಿಂಪಿಕ್ಸ್ ಆರಂಭವಾಗಲು ಒಂದು ವರ್ಷವಷ್ಟೇ ಬಾಕಿಯಿತ್ತು. ವಿಶ್ವ ಚಾಂಪಿಯನ್ಷಿಪ್ ಎದುರಿಗಿತ್ತು. ಅಂತರರಾಷ್ಟ್ರೀಯ ಮಟ್ಟದ ಅನೇಕ ಬಾಕ್ಸಿಂಗ್ ಕ್ರೀಡಾಕೂಟಗಳಿದ್ದವು. ಆದ್ದರಿಂದ ಆಗ ಕೆಲ ಬಾಕ್ಸಿಂಗ್ ಪ್ರೇಮಿಗಳು ಮತ್ತು ಇನ್ನೂ ಕೆಲ ಬಾಕ್ಸರ್ಗಳು ವಿಜೇಂದರ್ ವಿರುದ್ಧ ಮಾತಿನ ‘ಪಂಚ್’ ಹರಿಯ ಬಿಟ್ಟರು. ಏಕೆಂದರೆ ನಿಯಮಾವಳಿ ಪ್ರಕಾರ ವೃತ್ತಿಪರ ಬಾಕ್ಸಿಂಗ್ನಲ್ಲಿ ಆಡುವವರು ಅಮೆಚೂರ್ನಲ್ಲಿ ಪಾಲ್ಗೊಳ್ಳುವಂತಿಲ್ಲ. ಏನೇ ವಿರೋಧ ವ್ಯಕ್ತವಾದರೂ ಅದನ್ನು ಲೆಕ್ಕಿಸದೇ ವಿಜೇಂದರ್ ಈಗ ವೃತ್ತಿಪರ ಬಾಕ್ಸಿಂಗ್ನಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ಪಡೆಯುತ್ತಿದ್ದಾರೆ.
ಕೂಸು ಯಾವ ಲೆಕ್ಕ
ವಿಜೇಂದರ್ 2015ರ ಅಕ್ಟೋಬರ್ನಲ್ಲಿ ಮ್ಯಾಂಚೆಸ್ಟರ್ ಅರೆನಾದಲ್ಲಿ ಚೊಚ್ಚಲ ವೃತ್ತಿಪರ ಪಂದ್ಯವಾಡಲು ಸಜ್ಜಾಗುತ್ತಿ ದ್ದಾಗಲೂ ಅವರ ನಿರ್ಧಾರ ವನ್ನು ವಿರೋಧಿಸುವವರ ದೊಡ್ಡ ಪಡೆಯೇ ಇತ್ತು. ಕೆಲವೇ ನಿಮಿಷಗಳಲ್ಲಿ ವಿಜೇಂದರ್ ಸೋತು ಸುಣ್ಣವಾಗುತ್ತಾರೆ ಎಂದು ಹೀಯಾಳಿಸಿದ್ದರು. ವಿಜೇಂದರ್ ಅವರನ್ನು ತಮ್ಮ ದೇಶದ ಬಾಕ್ಸಿಂಗ್ ಪ್ರೇಮಿಗಳು ವಿರೋಧಿ ಸಿದ್ದರಿಂದ ಎದುರಾಳಿ ಇಂಗ್ಲೆಂಡ್ನ ಸೊನ್ನಿ ವೈಟಿಂಗ್ಗೆ ಆನೆಬಲ ಬಂದಂತಾಗಿತ್ತು. ಆದ್ದರಿಂದ ಅವರು ‘ವೃತ್ತಿಪರ ಬಾಕ್ಸಿಂಗ್ನಲ್ಲಿ ಅಂಬೆಗಾಲು ಇಡುತ್ತಿರುವ ವಿಜೇಂದರ್ ನನಗೆ ಯಾವ ಲೆಕ್ಕ. ಅವನಿನ್ನು ಕೂಸು’ ಎಂದು ಆತ್ಮಬಲ ಕುಗ್ಗಿಸುವ ಮಾತುಗಳನ್ನು ವೈಟಿಂಗ್ ಆಡಿದ್ದರು.
ವಿಜೇಂದರ್ ಅವರ ಮೊದಲ ವೃತ್ತಿಪರ ಬಾಕ್ಸಿಂಗ್ ಪಂದ್ಯ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಯಿತು. ವಿಜೇಂದರ್ ಸೋಲನ್ನೇ ಎದುರು ನೋಡುತ್ತಿದ್ದವರಿಗೆ ಅಚ್ಚರಿ ಕಾದಿತ್ತು. ಅವರು ಹೋರಾಡಿ ಕೆಲವೇ ನಿಮಿಷಗಳಲ್ಲಿ ಗೆದ್ದರು. ಆಗ ವಿಜೇಂದರ್ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. ವಿರೋಧಿಸಿದ್ದವರೇ ಈಗ ಅಭಿಮಾನಿಗಳಾ ಗಿದ್ದಾರೆ. ಸತತ ಎಂಟು ಪಂದ್ಯಗಳಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೂ ತಲುಪಿದರು.
ವೃತ್ತಿಪರ ಬಾಕ್ಸಿಂಗ್ನಲ್ಲಿ ಈಗಾಗಲೇ ಅನುಭವಿಗಳಾಗಿರುವ ಇಂಗ್ಲೆಂಡ್ನ ಡಿಯಾನ್ ಗಿಲ್ಲಿನ್, ಬಲ್ಗೇರಿಯಾದ ಸ್ಯಾಮಿತ್ ಹುಸೆಯಿನೊವ್, ಹಂಗರಿಯ ಅಲೆಕ್ಸಾಂಡರ್ ಹೋರ್ವತ್, ಆಸ್ಟ್ರೇಲಿಯಾದ ಕೆನ್ರಿ ಹೋಪ್, ತಾಂಜಾನಿಯಾದ ಫ್ರಾನ್ಸಿಸ್ ಚೇಕಾ ಹೀಗೆ ಅನೇಕ ಬಾಕ್ಸರ್ಗಳ ವಿರುದ್ಧ ವಿಜೇಂದರ್ ಮುಷ್ಠಿಪ್ರಹಾರ ನಡೆಸಿದರು.
ವೃತ್ತಿಪರ ಬಾಕ್ಸರ್ ಆಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್ವೇಟ್ ವಿಭಾಗದಲ್ಲಿ ಸತತ ಎರಡು ಸಲ ಪ್ರಶಸ್ತಿ ಗೆದ್ದರು. ಕೆಲ ತಿಂಗಳುಗಳಲ್ಲಿಯೇ ಇಷ್ಟೆಲ್ಲಾ ಸಾಧನೆ ಮಾಡಿ ಭಾರತದ ಮತ್ತಷ್ಟು ಹೊಸ ಬಾಕ್ಸರ್ಗಳು ವೃತ್ತಿಪರ ಬಾಕ್ಸಿಂಗ್ನತ್ತ ಮುಖ ಮಾಡಲು ಸ್ಫೂರ್ತಿಯಾದರು. ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ಅವರಿಗೂ ಪ್ರೇರಣೆಯಾದರು.