ಶ್ರೀನಗರ: ಭದ್ರತಾಪಡೆ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ನ ಒಬ್ಬ ಯೋಧ ಸಾವಿಗೀಡಾಗಿದ್ದು, ಹತ್ತು ವರ್ಷದ ಬಾಲಕಿ ಹಾಗೂ ಇಬ್ಬರು ನಾಗರಿಕರು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆ ದಾಳಿಯ ಹೊಣೆ ಹೊತ್ತಿದೆ.
ಸಿಆರ್ಪಿಎಫ್ನ ಕಾವಲುಪಡೆಯ ವಾಹನದ ಮೇಲೆ ನಡೆದ ಗುಂಡಿನ ದಾಳಿಯನ್ನು ತಾನು ನಡೆಸಿದ್ದಾಗಿ ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆ ಹೊಣೆ ಹೊತ್ತುಕೊಂಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕಾಶ್ಮೀರದಲ್ಲಿ ಭದ್ರತಾಪಡೆಗಳ ಮೇಲೆ ಲಷ್ಕರ್ ಉಗ್ರರು ದಾಳಿಯನ್ನು ತೀವ್ರಗೊಳಿಸುವುದಾಗಿ ಹೇಳಿರುವ ಲಷ್ಕರ್ನ ವಕ್ತಾರ ಅಬ್ದುಲ್ಲಾ ಗಜ್ನಾವಿ, ಈ ದಾಳಿ ನಡೆಸಿದ ಅಬು ಮೊಸಾ ಕೃತ್ಯವನ್ನು ಪ್ರಶಂಸಿಸಿದ್ದಾನೆ. ಜತೆಗೆ, ಆತನ್ನು ಸನ್ಮಾನಿಸುವುದಾಗಿ ಹೇಳಿ ಇಂಡಿಯಾ ಟುಡೆಗೆ ಮೇಲ್ ಕಳುಹಿಸಿದ್ದಾನೆ.
ಇಲ್ಲಿನ ಪಂಥಚೌಕದಲ್ಲಿ ಮಧ್ಯಾಹ್ನ 97 ಬೆಟಾಲಿಯನ್ನ ಸಿಆರ್ಪಿಎಫ್ ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಆರ್ಪಿಎಫ್ನ ಕಾನ್ಸ್ಟೆಬಲ್ ಬಸಪ್ಪ ಅವರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ವಾಗಿದೆ ಎಂದು ವರದಿಯಾಗಿದೆ.
ವಾಹನ ಚಾಲಕನೂ ಗಾಯಗೊಂಡಿದ್ದಾರೆ. ಸಿಆರ್ಪಿಎಫ್ನ ಯೋಧರು ಏ. 9ರಂದು ನಡೆಯುವ ಲೋಕಸಭೆ ಉಪ ಚುನಾವಣೆ ಕಾರ್ಯಕ್ಕೆ ಬಸ್ನಲ್ಲಿ ತೆರಳುತ್ತಿದ್ದರು. ಈ ವೇಳೆ ದಾಳಿ ನಡೆದಿದೆ.