ತುಮಕೂರು: ರಾಜ್ಯದಲ್ಲಿ ಬಡತನ ಮತ್ತು ಬಡತನ ರೇಖೆಗಿಂತ ಕೆಳಗಿರುವ 12 ಲಕ್ಷ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಶನಿವಾರ ತಾಲ್ಲೂಕಿನ ನಾಗವಲ್ಲಿ ಗ್ರಾಮದಲ್ಲಿ ನಡೆದ ಉಜ್ವಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 2 ಕೋಟಿ ಜನರು ಅಡುಗೆ ಅನಿಲ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಈ ಹಣದಲ್ಲಿ ದೇಶದ 5 ಕೋಟಿ ಬಡ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ 12 ಲಕ್ಷ ಕುಟುಂಬಗಳಿಗೆ ಮತ್ತು ತುಮಕೂರು ಜಿಲ್ಲೆಯಲ್ಲಿ 2 ಲಕ್ಷ, ತುಮಕೂರು ತಾಲ್ಲೂಕಿನಲ್ಲಿ ಅಂದಾಜು 10 ಸಾವಿರ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತಿದೆ ಎಂದು ವಿವರಿಸಿದರು.
ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ: ಕೇಂದ್ರ ಸರ್ಕಾರದ ಯೋಜನೆಗಳಾದ ಮುದ್ರಾ, ಜನಧನ್, ಸ್ಟಾರ್ಟ್ ಅಪ್, ಸ್ಟ್ಯಾಂಡ್ ಅಪ್ ಮುಂತಾದ ಯೋಜನೆಗಳ ಪ್ರಯೋಜನ ಪಡೆಯಲು ಸಾರ್ವಜನಿಕರು ಆಸಕ್ತಿ ತೋರಿದರೂ ಸಾಲ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಮಕೂರು ಗ್ರಾಮೀಣ ಶಾಸಕ ಬಿ.ಸುರೇಶಗೌಡ ಮಾತನಾಡಿ,‘ಉಜ್ವಲ ಯೋಜನೆಯಡಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 8,500 ಫಲಾನುಭವಿ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ 5,100 ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಮಂಜೂರಾತಿ ಪತ್ರ ಲಭಿಸಿದೆ.
ಇವರಿಗೆ ಇನ್ನೊಂದು ವಾರದಲ್ಲಿ ಅಡುಗೆ ಅನಿಲ ಸಂಪರ್ಕ ಲಭಿಸಲಿದೆ. ಸಾಂಕೇತಿಕವಾಗಿ ಈ ದಿನ 50 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಗಿದೆ’ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ, ಬಿಜೆಪಿ ಹಿರಿಯ ಮುಖಂಡ ಜಿ.ಎಸ್.ಬಸವರಾಜು, ಬೆಂಗಳೂರಿನ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೋರೇಷನ್ ಉಪಪ್ರಧಾನ ವ್ಯವಸ್ಥಾಪಕ ಅಂಬಾಭವಾನಿಕುಮಾರ್, ಇಂಡಿಯನ್ ಆಯಿಲ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಅಭಿಜಿತ್ ಬೇ
ವೇದಿಕೆಯಲ್ಲಿದ್ದರು.