ಅದು ‘ಜನ ಗಣ ಮನ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಮೈಕ್ ಕೈಗೆತ್ತಿಕೊಂಡ ಚಿತ್ರದ ನಿರ್ದೇಶಕ ಶಶಿಕಾಂತ್ ಆನೇಕಲ್, ‘ಸಮಾಜದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಚಿತ್ರದಲ್ಲಿ ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗಿದೆ’ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು. ‘ಸತ್ಯ ಹರಿಶ್ಚಂದ್ರ’ ಚಿತ್ರದ ಹೆಸರಿಗೆ ಅಗೌರವ ತರಲಾಗಿದೆ ಎಂದು ಕನ್ನಡಿಗರು ಬೇಸರಿಸಿಕೊಂಡಿದ್ದಾರೆ. ಇನ್ನು ಮುಂದೆ ಮರುಶೀರ್ಷಿಕೆ ನೀಡುವಾಗ ಪರಾಮರ್ಶೆ ನಡೆಸಿ ಅನುಮೋದನೆ ನೀಡಲು ಮಂಡಳಿ ನಿರ್ಧರಿಸಿದೆ ಎಂದರು.
‘ಕೆಲವು ನಿರ್ದೇಶಕರು ಒಪ್ಪಂದ ಆಗುವುದಕ್ಕೂ ಮೊದಲು ಒಂದು ರೀತಿ ವರ್ತಿಸುತ್ತಾರೆ. ಬಳಿಕ ತಮ್ಮ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿರುವುದು ತಪ್ಪು’ ಎಂದರು.
‘ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ನಡೆಯುತ್ತಲೇ ಇದೆ. ಇದನ್ನು ನಿರ್ಮೂಲನೆ ಮಾಡುವ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಐದು ಪೈಟ್ಗಳಿವೆ‘ ಎಂದರು ನಾಯಕಿ ಆಯಿಷಾ.
ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ ಇರುವ ಚಿತ್ರಕ್ಕೆ ಸಾಂಬಶಿವರೆಡ್ಡಿ ಬಂಡವಾಳ ಹೂಡಿದ್ದಾರೆ.