ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದಲ್ಲಿ ಕಳೆಗಟ್ಟಿದ ಚಿಣ್ಣರ ಕಲರವ

Last Updated 14 ನವೆಂಬರ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಬ್ಬನ್ ಉದ್ಯಾನದಲ್ಲಿ ಆಯೋಜಿಸಿರುವ ಮಕ್ಕಳ ಹಬ್ಬದಲ್ಲಿ ಮಂಗಳವಾರ ಚಿಣ್ಣರ ಕಲರವ ಕಳೆಗಟ್ಟಿತ್ತು.

ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ರೂಪಿಸಿದ್ದ ದೆಹಲಿಯ ಬಹಾಯಿ ಮಂದಿರದ ಪ್ರತಿಕೃತಿ ಹಾಗೂ ತಾಜ್‌ಮಹಲ್‌ ಪ್ರತಿಕೃತಿ ಮಕ್ಕಳ ಆಕರ್ಷಣೆಯ ಕೇಂದ್ರವಾಗಿದ್ದವು. ಉದ್ಯಾನದಲ್ಲಿ ಅನಾವರಣಗೊಂಡಿದ್ದ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಕುತೂಹಲದಿಂದ ವೀಕ್ಷಿಸಿದ ಚಿಣ್ಣರು, ವಿವಿಧ ಭಾವ ಭಂಗಿಗಳಲ್ಲಿ ಛಾಯಾಚಿತ್ರ ತೆಗೆಸಿಕೊಂಡರು. ಬುಗುರಿ, ಗೋಲಿ, ಲಗೋರಿ, ಪಗಡೆ, ಹಗ್ಗದಾಟ, ಅಳಗುಳಿ ಮನೆ, ಚಾಟರಿ ಬಿಲ್ಲು ಆಟವಾಡಿ ದಣಿದ ಮಕ್ಕಳು ಎಳನೀರು ಕುಡಿದು ತಣಿದರು.

ವಿವಿಧ ಇಲಾಖೆಗಳು ಇಟ್ಟಿದ್ದ ಮಳಿಗೆಗಳಿಗೆ ಭೇಟಿ ನೀಡಿದ ಚಿಣ್ಣರಿಗೆ ಅಲ್ಲಿನ ಸಿಬ್ಬಂದಿ ಆಟದೊಂದಿಗೆ ಅರಿವಿನ ಪಾಠವನ್ನು ಬೋಧಿಸಿದರು. ಸಂಚಾರ ಪೊಲೀಸರು ವಿವಿಧ ಚಟುವಟಿಕೆಗಳ ಮೂಲಕ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಅರಣ್ಯ ಇಲಾಖೆ ನಿರ್ಮಿಸಿದ್ದ ಮಳಿಗೆ ಕಾಡು ಪ್ರಾಣಿಗಳ ಪ್ರತಿರೂಪದೊಂದಿಗೆ ಪರಿಸರ ರಕ್ಷಣೆಯ ಮಹತ್ವವನ್ನು ಮಕ್ಕಳ ಮನಮುಟ್ಟುವಂತೆ ವಿವರಿಸುತ್ತಿತ್ತು.

ವಿವಿಧ ಶಾಲೆ ಮತ್ತು ಸಂಸ್ಥೆಗಳ ಮಕ್ಕಳು ಪ್ರದರ್ಶಿಸಿದ ಡೊಳ್ಳುಕುಣಿತ, ವೀರಗಾಸೆ, ಸುಗ್ಗಿ ಕುಣಿತಗಳು ಉದ್ಯಾನಕ್ಕೆ ಜನಪದ ಮೆರಗು ತಂದಿತ್ತು. ಕಲಾತಂಡಗಳೊಂದಿಗೆ ಚಿಣ್ಣರು ಹೆಜ್ಜೆ ಹಾಕಿದರು. ಮಕ್ಕಳೊಂದಿಗೆ ಮಗುವಾಗಿ ನಲಿಯುತ್ತಿದ್ದ ಶಿಕ್ಷಕರು ಹಾಗೂ ಪೋಷಕರು ನೃತ್ಯ ಮಾಡಿ ಮಕ್ಕಳನ್ನು ರಂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ನಾಲ್ಕು ದಿನಗಳ ಮಕ್ಕಳ ಹಬ್ಬವನ್ನು 4 ಲಕ್ಷ ಜನರು ವೀಕ್ಷಿಸಿದ್ದಾರೆ. ಕೊನೆಯ ದಿನ ರಾಜ್ಯದ ವಿವಿಧ ಕಡೆಗಳಿಂದ ಮಕ್ಕಳು ಬಂದಿದ್ದಾರೆ. ಮಕ್ಕಳಿಗೆ ಗ್ರಾಮೀಣ ಪರಿಸರ, ಆಟಗಳನ್ನು ಪರಿಚಯಿಸುವಲ್ಲಿ ಹಬ್ಬ ಯಶಸ್ವಿಯಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಮಹಾಂತೇಶ ಮುರಗೋಡ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT