ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ನಾಡಿನಲ್ಲಿ ಕ್ರಿಕೆಟ್ ಗಾಳಿ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ವೃತ್ತಿಪರ ಕ್ರಿಕೆಟ್‌ ಆರಂಭಿಸುವ ಮೊದಲೇ ವಿಶ್ವಕಪ್‌ ಗೆದ್ದಷ್ಟು ಖುಷಿಯಾಗಿದೆ...’
–ಹೀಗೆ ಅತ್ಯಂತ ಖುಷಿಯಿಂದ ಉದ್ಗರಿಸಿದ್ದು ಹೊಕಾಯಿಟೊ ಜಿಮೂಮಿ. ಇವರು ಯಾರು, ಯಾವ ದೇಶದ ಕ್ರಿಕೆಟಿಗ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು.

2012ರ ಐಪಿಎಲ್‌ ಟೂರ್ನಿಗೆ ಆಟಗಾರರ ಹರಾಜು ನಡೆಯತ್ತಿದ್ದ ಸಮಯವದು. ಕೋಲ್ಕತ್ತ ನೈಟ್‌ ರೈಡರ್ಸ್ ಫ್ರಾಂಚೈಸ್‌, ಹೊಕಾಯಿಟೊ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಾಗ ಅನೇಕ ಆಟಗಾರರಿಗೆ ಹೊಕಾಯಿಟೊ ಯಾರು ಎಂಬುದು ಗೊತ್ತಿರಲಿಲ್ಲ. ಎಲ್ಲರಿಗೂ ಗೊತ್ತಾಗುವಂತ ಸಾಧನೆಯನ್ನೂ ಅವರು ಮಾಡಿರಲಿಲ್ಲ.

ಮೊದಲ ಬಾರಿಗೆ ಐಪಿಎಲ್‌ ತಂಡದಲ್ಲಿ ಸ್ಥಾನ ಪಡೆದಾಗ ಅವರಿಗೆ ಸಾಕಷ್ಟು ಖುಷಿಯಾಗಿತ್ತು. ಐಪಿಎಲ್‌ ಟೂರ್ನಿಯ ಒಂದೂ ಪಂದ್ಯದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಅದು ಬೇರೆ ಮಾತು ಆದರೆ, ಐಪಿಎಲ್‌ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಹೊಕಾಯಿಟೊ ಮತ್ತು ನಾಗಾಲ್ಯಾಂಡ್‌ ಪಾಲಿಗೆ ಸ್ಮರಣೀಯವಾಗಿತ್ತು. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ ನಾಗಾಲ್ಯಾಂಡ್‌ನ ಮೊದಲ ಆಟಗಾರ ಅವರು. ಐಪಿಎಲ್‌ನಲ್ಲಿ ಸ್ಥಾನ ಗಳಿಸಿದ ಚೊಚ್ಚಲ ಆಟಗಾರ.

ನಾಗಾಲ್ಯಾಂಡ್‌ನಲ್ಲಿ ವೃತ್ತಿಪರ ಕ್ರಿಕೆಟಿಗರಿಗೆ ಬೇಕಾಗುವ ಸುಸಜ್ಜಿತ ಕ್ರೀಡಾಂಗಣಗಳಿಲ್ಲ, ಕ್ಲಬ್‌ಗಳಿಲ್ಲ, ಸಮರ್ಥ ಕೋಚ್‌ಗಳಂತೂ ಇಲ್ಲವೇ ಇಲ್ಲ. ಕ್ರಿಕೆಟ್‌ ಎನ್ನುವ ಕ್ರೀಡೆ ಇದೆಯೇ ಎಂದು ಕೇಳುವವರೂ ಅಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿರುವ ನಾಗಾಲ್ಯಾಂಡ್‌ನಲ್ಲಿ ಹೊಕಾಯಿಟೊ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗುವಂಥದ್ದು.

ಈ ಎಲ್ಲಾ ವಿಷಯವನ್ನು ಪ್ರಸ್ತಾಪಿಸಲು ಒಂದು ಕಾರಣವಿದೆ. ಹೋದ ವಾರ 19 ವರ್ಷದ ಒಳಗಿನವರ ಮಹಿಳಾ ಕ್ರಿಕೆಟ್‌ನಲ್ಲಿ ನಾಗಾಲ್ಯಾಂಡ್‌ ತಂಡ ಕೇರಳ ಎದುರಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಒಂದೇ ರನ್‌ಗೆ ಆಲೌಟ್‌ ಆಗಿತ್ತು. 17 ಓವರ್‌ಗಳನ್ನು ಆಡಿದ್ದರೂ ನಾಗಾಲ್ಯಾಂಡ್‌ ಗಳಿಸಿದ್ದು ಒಂದೇ ರನ್‌. ಇನ್ನೊಂದು ರನ್‌ ವೈಡ್‌ನಿಂದ ಬಂದಿತ್ತು. ಈ ಸುದ್ದಿ ಕೂಡ ಹೆಚ್ಚು ಪ್ರಚಾರ ಪಡೆಯಿತು.

ಆಗ ಕೆಲವರು ‘ಕ್ರಿಕೆಟ್‌ ಗೊತ್ತಿಲ್ಲದ ರಾಜ್ಯಗಳಿಗೆ ಅವಕಾಶ ಕೊಟ್ಟರೆ ಹೀಗೆ ಆಗುವುದು’ ಎಂದು ಟೀಕಿಸಿದರು. ಇನ್ನೂ ಕೆಲವರು ‘ಹುಟ್ಟುತ್ತಲೇ ಮಗು ನಡೆಯಬೇಕು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು. ಹೀಗೆ ಹಲವು ಪರ, ವಿರೋಧ ಹೇಳಿಕೆಗಳು ಕೇಳಿಬಂದವು. ಯಾರು ಏನೇ ಹೇಳಲಿ, ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್‌ ಬೆಳೆಯಬೇಕಾದರೆ ಆರಂಭದಲ್ಲಿ ಇಂಥ ತೊಡರುಗಳು ಸಹಜ.

ಮೊದಲೇ ಅವಕಾಶ ಕೊಟ್ಟಿದ್ದರೆ: ಭಾರತದ ಎಲ್ಲಾ ರಾಜ್ಯಗಳಲ್ಲಿ ಕ್ರಿಕೆಟ್‌ ಜನಪ್ರಿಯಗೊಂಡಿಲ್ಲ. ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಸಿಕ್ಕಿಂ ರಾಜ್ಯಗಳು ಸ್ಪರ್ಧಾತ್ಮಕ ಕ್ರಿಕೆಟ್ ಆಡುವಷ್ಟು ಅಭಿವೃದ್ಧಿಯಾಗಿಲ್ಲ. ಅಸ್ಸಾಂ ಮತ್ತು ತ್ರಿಪುರದಲ್ಲಿ ಇತ್ತೀಚೆನ ವರ್ಷಗಳಲ್ಲಿ ಈ ಕ್ರೀಡೆಗೆ ಉತ್ತಮ ಬೆಂಬಲ ಸಿಗುತ್ತಿದೆ. ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ರಣಜಿಯಲ್ಲಿ ಈ ತಂಡಗಳು ಸ್ಪರ್ಧಾತ್ಮಕ ಪ್ರದರ್ಶನ ನೀಡುತ್ತಿವೆ.

ಜಗತ್ತಿನ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿರುವ ಬಿಸಿಸಿಐ ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಮೊದಲು ಆಸಕ್ತಿ ತೋರಿಸಿರಲಿಲ್ಲ. ಲೋಧಾ ಸಮಿತಿಯ ಶಿಫಾರಸಿನ ಮೇರೆಗೆ ಈಗ ಅಲ್ಲಿ ಕ್ರೀಡೆಯ ಅಭಿವೃದ್ಧಿಗೆ ಮುಂದಾಗಿದೆ. ಸುಪ್ರೀಂ ಕೋರ್ಟ್‌ ನೇಮಿಸಿರುವ ಕ್ರಿಕೆಟ್‌ ಆಡಳಿತ ಸಮಿತಿ ಗುಡ್ಡಗಾಡು ರಾಜ್ಯಗಳಲ್ಲಿಯೂ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ ಅಭಿವೃದ್ಧಿಗೆ ಈಚೆಗೆ ಒತ್ತು ನೀಡಿದೆ.

ಲೋಧಾ ಸಮಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಹಲವು ಶಿಫಾರಸುಗಳ ಪೈಕಿ ಕೆಲವು ಮಹತ್ವದ ಅಂಶಗಳು ಇವೆ. ಮೇಘಾಲಯ, ಮಣಿಪುರ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ತಂಡಗಳಿಗೆ 2018–19ರ ಋತುವಿನಲ್ಲಿ ರಣಜಿ ಟೂರ್ನಿಯಲ್ಲಿ ಆಡಲು ಅವಕಾಶ ಕೊಡಬೇಕು ಎಂದು ಹೇಳಿರುವುದು ಪ್ರಮುಖ ಶಿಫಾರಸು.

ಜೊತೆಗೆ ಈ ಎಲ್ಲಾ ರಾಜ್ಯಗಳಿಗೆ ಬಿಸಿಸಿಐ ಮಾನ್ಯತೆ ಕೊಡಬೇಕು ಎಂದೂ ಹೇಳಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೆಲಸ ಮಾಡುತ್ತಿದೆ. ಪುರುಷರ ಜೊತೆಗೆ ಮಹಿಳಾ ಕ್ರಿಕೆಟ್‌ ಸುಧಾರಣೆಗೂ ಕ್ರಮ ಕೈಗೊಂಡಿದೆ. ಎರಡು ತಿಂಗಳು ಹಿಂದೆ ಈಶಾನ್ಯ ರಾಜ್ಯಗಳಲ್ಲಿ ಯುವತಿಯರಿಗೆ ಪ್ರತಿಭಾ ಶೋಧ ಶಿಬಿರ ಹಮ್ಮಿಕೊಂಡಿತ್ತು.

ತ್ರಿಪುರ ಕ್ರಿಕೆಟ್‌ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭೌಮಿಕ್‌ ಇತ್ತೀಚೆಗೆ ನಾಗಾಲ್ಯಾಂಡ್‌ಗೆ ಭೇಟಿ ನೀಡಿ ಅಲ್ಲಿ ಕ್ರಿಕೆಟ್ ಹೇಗೆ ಅಭಿವೃದ್ಧಿ ಮಾಡಬಹುದು ಎನ್ನುವುದರ ಬಗ್ಗೆ ಪರಿಶೀಲನೆ ಮಾಡಿದ್ದರು. ಕ್ರಿಕೆಟ್‌ ಬೆಳವಣಿಗೆಗೆ ಅಗತ್ಯ ಇರುವ ಎಲ್ಲಾ ನೆರವನ್ನು ತ್ರಿಪುರದಿಂದಲೂ ನೀಡುವುದಾಗಿ ಭರವಸೆ ನೀಡಿದ್ದರು.

ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಅವಕಾಶ ಇಲ್ಲದ ಕಾರಣ ಹೊಕಾಯಿಟೊ ಜಿಮೂಮಿ, ಜೊನಾಥನ್‌ ಅವರಂಥ ಆಟಗಾರರು ಅವಕಾಶ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗುತ್ತಾರೆ.

ನಾಗಾಲ್ಯಾಂಡ್‌ನ ಕೃಷಿಕರೊಬ್ಬನ ಮಗ ಮೆಸ್‌ ಹೊಟೊ, ಮಣಿಪುರದ ಸಹಾಯಕ ಶಿಕ್ಷಕಿಯೊಬ್ಬರ ಪುತ್ರ ಖಮಗೈಲುಂಗೆ ಆರೇಳು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯಲ್ಲಿ ‘ಬಾಲ್‌ ಬಾಯ್‌’ಗಳಾಗಿ ಕೆಲಸ ಮಾಡಲು ಅವಕಾಶ ಪಡೆದಿದ್ದರು. ಹೀಗೆ ಈಶಾನ್ಯ ರಾಜ್ಯಗಳ ಅನೇಕ ಪ್ರತಿಭೆಯಿದ್ದರೂ ಗುರುತಿಸಿಕೊಳ್ಳಲು ಅವಕಾಶವಿಲ್ಲದಂತಾಗಿದೆ.

ನಾಗಾಲ್ಯಾಂಡ್‌ ಮಹಿಳಾ ತಂಡ ಕೂಡ ಹೆಚ್ಚು ಅವಕಾಶಗಳು ಇಲ್ಲದ ಕಾರಣ ಕಳಪೆ ಪ್ರದರ್ಶನ ನೀಡಿದೆ. ಪಂದ್ಯಗಳ ಸಂಖ್ಯೆ ಹೆಚ್ಚಾಗಿ ಸೌಲಭ್ಯಗಳನ್ನು ಕೊಟ್ಟರೆ, ಕ್ರಿಕೆಟ್‌ ಬೆಳವಣಿಗೆ ದೂರದ ಬೆಟ್ಟವೇನಲ್ಲ.

ಕ್ರಿಕೆಟ್‌ ಎಂದರೂ ಫುಟ್‌ಬಾಲ್‌ ಕ್ರೀಡಾಂಗಣವೇ ನೆನಪಾಗುತ್ತೆ!
2015ರಲ್ಲಿ ನಡೆದ ಘಟನೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಗುವಾಹಟಿಯಲ್ಲಿ ಕರ್ನಾಟಕ ಮತ್ತು ಅಸ್ಸಾಂ ತಂಡಗಳ ನಡುವೆ ರಣಜಿ ಪಂದ್ಯ ನಡೆದಿತ್ತು. ಊರ ಹೊರಗಡೆ ಇರುವ ಬರ್ಸಾಪುರ ಕ್ರೀಡಾಂಗಣಕ್ಕೆ ಬರಬೇಕಿದ್ದ ಕರ್ನಾಟಕ ತಂಡದ ಬಸ್‌ ನಿಗದಿತ ಸಮಯಕ್ಕೆ ಹೋಟೆಲ್‌ ಬಳಿ ಬಂದಿರಲಿಲ್ಲ. ಆದ್ದರಿಂದ ಆಟಗಾರರು ಆಟೊದಲ್ಲಿ ಕ್ರೀಡಾಂಗಣಕ್ಕೆ ಬರಬೇಕಾಯಿತು.

ಕ್ರಿಕೆಟ್‌ ಕ್ರೀಡಾಂಗಣಕ್ಕೆ ಹೋಗು ಎಂದು ಆಟೊ ಚಾಲಕನಿಗೆ ಮನದಟ್ಟಾಗುವಂತೆ ಹೇಳಿದ್ದರೂ ಆ ಆಟೊ ಚಾಲಕ ಕರ್ನಾಟಕದ ಆಟಗಾರರನ್ನು ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದ! ಅಸ್ಸಾಂ, ನಾಗಾಲ್ಯಾಂಡ್‌, ಮಿಜೋರಾಂ, ಮೇಘಾಲಯ ರಾಜ್ಯಗಳ ಜನರ ಪ್ರೀತಿ ಇರುವುದು ಫುಟ್‌ಬಾಲ್‌ ಮೇಲೆ. ಅವರ ಪಾಲಿಗೆ ಕ್ರೀಡೆ ಎಂದರೆ ಫುಟ್‌ಬಾಲ್‌ ಮಾತ್ರ. ಅಲ್ಲಿನ ಜನ ಹೆಚ್ಚು ಕಾಲ್ಚೆಂಡಿನಾಟದ ಸೊಬಗನ್ನೇ ಹೆಚ್ಚು ನೋಡುತ್ತಾರೆ.

ಪಂದ್ಯದ ಬಳಿಕ ಸ್ಥಳೀಯ ಆಟೊ ಚಾಲಕನನ್ನು ‘ಕ್ರಿಕೆಟ್‌ ಕ್ರೀಡಾಂಗಣವೆಂದರೂ ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದು ಏಕೆ’ ಎನ್ನುವ ಪ್ರಶ್ನೆಗೆ ‘ಗುವಾಹಟಿಯಲ್ಲಿ ಕ್ರಿಕೆಟ್‌ ಕ್ರೀಡಾಂಗಣ ಕೂಡ ಇದೆಯೇ, ಅದು ಎಲ್ಲಿದೆ’ ಎಂದು ಮರು ಪ್ರಶ್ನೆ ಹಾಕಿದ್ದ! ಆಗ ಪೆಚ್ಚಾಗುವ ಸರದಿ ಮಾಧ್ಯಮದವರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT