ಆಳಂದ: ‘ಪ್ರಸಕ್ತ ವರ್ಷದ ರೈತರ ತೊಗರಿ ಖರೀದಿಯು ಡಿಸೆಂಬರ್ ತಿಂಗಳಲ್ಲಿ ಆರಂಭಿಸಬೇಕು. ಕಳೆದ ವರ್ಷದಂತೆ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಲಿದೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಪಾಟೀಲ ಧಂಗಾಪುರ ಹೇಳಿದರು.
ತಾಲ್ಲೂಕಿನ ನರೋಣಾ ಗ್ರಾಮದ ರೈತ ಬಸವರಾಜ ಚಕ್ಕಿ ಅವರ ಹೊಲದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ನಡೆದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ವ್ಯವಸಾಯ ಸೇವಾ ಸಂಘದವರೂ ಖರೀದಿಯಲ್ಲಿ ಹಣ ವಸೂಲಿ, ರೈತರಿಗೆ ತಾರತಮ್ಯ ಮಾಡಿರುವುದು ನಡೆದಿದೆ. ಕಾರಣ ಕೃಷಿ ಮತ್ತು ಕಂದಾಯ ಇಲಾಖೆ ಮೂಲಕ ಆಯಾ ಗ್ರಾಮದ ರೈತರ ತೊಗರಿ ಬೆಳೆ ಹೆಸರು ನೋಂದಣಿ, ದಾಖಲೆ ಪತ್ರ ಪಡೆದು ಖರೀದಿ ಕೇಂದ್ರಗಳಿಗೆ ಕಳು ಹಿಸುವ ವ್ಯವಸ್ಥೆ ಮಾಡಬೇಕು’ ಎಂದರು.
ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ ಮಾತನಾಡಿ, ‘ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮುಂದುವರಿಸುವುದು ಲಾಭದಾಯಕ ಇಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವುದಕ್ಕೆ ಆಧುನಿಕ ಕೃಷಿ ಪದ್ಧತಿ ಮತ್ತು ಸರ್ಕಾರದ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೆಶಕ ಜಿಲಾನಿ ಮೋಕಾಶಿ ಮಾತನಾಡಿ, ‘ರೈತರು ಹೊಸ ಕೃಷಿ ಪದ್ಧತಿ, ಬೆಳೆ, ಬಿತ್ತನೆ ಜೊತೆಗೆ ಸರ್ಕಾರದ ಸೌಲಭ್ಯಗಳ ಬಗೆಗೆ ತಿಳಿವಳಿಕೆ ಪಡೆಯಬೇಕು. ಪ್ರತಿಯೊಬ್ಬ ರೈತನೂ ಮಣ್ಣಿನ ಆರೋಗ್ಯ ಹಾಗೂ ನೀರಿನ ಸದ್ಬಳಕೆ, ಸಂರಕ್ಷಣೆ ಕುರಿತು ಕಾಳಜಿವಹಿಸಬೇಕು’ ಎಂದರು.